'ಪೌರತ್ವ ತಿದ್ದುಪಡಿ ಸ್ಪಷ್ಟತೆ ಇಲ್ಲದ ಸಂವಿಧಾನ ವಿರೋಧಿ ಕಾನೂನು'
ಕರ್ನಾಟಕ ಹೈಕೋರ್ಟ್ ವಕೀಲ ಕ್ಲಿಷ್ಟನ್ ರೊಝಾರಿಯೋ
ಉಡುಪಿ, ಫೆ.17: ಕೇಂದ್ರ ಸರಕಾರವು ಜಾರಿಗೆ ತರುತ್ತಿರುವ ಪ್ರಸ್ತಾವಿತ ಶಾಸನಗಳಾದ ಸಿಎಎ, ಎನ್ಆರ್ಸಿ ಮತ್ತು ಎನ್ಪಿಆರ್ನಲ್ಲಿ ಯಾವುದೇ ಸಷ್ಟತೆ ಇಲ್ಲ. ಇದರಿಂದ ಎಲ್ಲ ನಾಗರಿಕರನ್ನು ಅನುಮಾನದಿಂದ ನೋಡುವಂತೆ ಈ ಕಾಯಿದೆಗಳು ಮಾಡುತ್ತಿವೆ ಎಂದು ಕರ್ನಾಟಕ ಹೈಕೋರ್ಟ್ ವಕೀಲ ಕ್ಲಿಷ್ಟನ್ ರೊಝಾರಿಯೋ ಹೆೀಳಿದ್ದಾರೆ.
ತೋನ್ಸೆ ಸಹಬಾಳ್ವೆ ಸಮಿತಿಯ ವತಿಯಿಂದ ಕೆಮ್ಮಣ್ಣು ಚರ್ಚ್ ಹಾಲ್ನಲ್ಲಿ ರವಿವಾರ ಆಯೋಜಿಸಲಾದ ಸಿಎಎ, ಎನ್ಆರ್ಸಿ ಮತ್ತು ಎನ್ಪಿಆರ್ ಕುರಿತ ಜನಜಾಗೃತಿ ಸಭೆಯನ್ನು್ದೇಶಿಸಿ ಅವರು ಮಾತನಾಡುತಿದ್ದರು.
ಕೆಮ್ಮಣ್ಣು ಚರ್ಚ್ನ ಧರ್ಮಗುರು ಫಾ.ವಿಕ್ಟರ್ ಡಿಸೋಜ ಸಂವಿಧಾನದ ಮುನ್ನುಡಿಯನ್ನು ಓದುವ ಮೂಲಕ ಸಭೆಯನ್ನು ಉದ್ಘಾಟಿಸಿದರು. ಬೆಂಗಳೂರಿನ ವಕೀಲರಾದ ಮೊಹಮ್ಮದ್ ನಿಯಾಜ್ ುತ್ತು ಅವಾನಿ ಚೌಕ್ಸಿ ಮಾತನಾಡಿದರು.
ಭಾರತವು ಜಾತ್ಯತೀತ ದೇಶವಾಗಿದೆ. ಸಂವಿಧಾನದ ಪೀಠಿಕೆಯಲ್ಲಿ ಎಲ್ಲೂ ಧರ್ಮದ ವಿಚಾರ ಪ್ರಸ್ತಾಪ ಇಲ್ಲ. ನಮ್ಮ ಸಂವಿಧಾನವು ನಮ್ಮ ಮೂಲ ಭೂತ ಹಕ್ಕುಗಳನ್ನು ಜಾತಿ ಮತ್ತು ಧರ್ಮದ ಹೊರತಾಗಿಯೂ ರಕ್ಷಿಸುತ್ತದೆ. ಆದರೆ ಸಿಎಎ, ಎನ್ಆರ್ಸಿ, ಎನ್ಪಿಆರ್ ನಮ್ಮ ಸಂವಿಧಾನಕ್ಕೆ ವಿರೋಧವಾಗಿ ರುವ ಕಾನೂನುಗಳಾಗಿವೆ ಎಂದು ಅವರು ತಿಳಿಸಿದರು.
ಪೌರತ್ವ ಕಾನೂನಿನಲ್ಲಿ ಧರ್ಮಾಧಾರಿತ ವಿಚಾರ ಇರಲಿಲ್ಲ. ಈ ಕಾನೂನು ಈವರೆಗೆ 9 ಬಾರಿ ತಿದ್ದುಪಡಿಯಾದರೂ ಎಲ್ಲೂ ಚರ್ಚೆಗಳು ನಡೆದಿಲ್ಲ. ಈಗ ಮಾಡಿರುವ ತಿದ್ದುಪಡಿಯಲ್ಲಿ ಧರ್ಮದ ವಿಚಾರವನ್ನು ಪ್ರಸ್ತಾಪಿಸಿದ ಕಾರಣಕ್ಕೆ ಎಲ್ಲ ಕಡೆ ಹೋರಾಟಗಳು ನಡೆಯುತ್ತಿವೆ. ಈ ದೇಶಕ್ಕೆ ಸ್ವಾತಂತ್ರ ತಂದು ಕೊಡುವ ಹೋರಾಟದಲ್ಲಿ ಎಲ್ಲ ಧರ್ಮದವರು ತ್ಯಾಗಬಲಿದಾನವನ್ನು ಮಾಡಿ ದ್ದಾರೆ. ಆದುದರಿಂದ ಈ ಸಂವಿಧಾನ ವಿರೋಧಿ ಕಾನೂನಿನ ವಿರುದ್ಧ ಕೂಡ ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕಾಗಿದೆ ಎಂದರು.
ಜಿಪಂ ಸದಸ್ಯ ಜನಾರ್ದನ ತೋನ್ಸೆ, ತಾಪಂ ಸದಸ್ಯೆ ಸುಲೋಚನಾ, ಚೇಲ್ಸ್ ಲೂಯಿಸ್, ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಅಧ್ಯಕ್ಷ ಅಬೂಬಕರ್ ನೇಜಾರ್, ಗೋಪಾಲ್ ಗುಜ್ಜರಬೆಟ್ಟು, ರಾಮ ಮಾಸ್ಟರ್ ಮೊದಲಾದವರು ಉಪಸ್ಥಿತರಿದ್ದರು.
ಸ್ಥಳೀಯ ಹಿರಿಯ ನಾಯಕ ಕೆ.ರಘುರಾಮ್ ಶೆಟ್ಟಿ ಸ್ವಾಗತಿಸಿದರು. ವೈದ್ಯ ಡಾ.ರಫೀಕ್ ತೋನ್ಸೆ ಪ್ರಾಸ್ತಾವಿಕವಾಗಿ ಮಾತನಾಡಿದರು. ತೋನ್ಸೆ ಗ್ರಾಪಂ ಸದಸ್ಯ ನಿತ್ಯಾನಂದ ಕೆಮ್ಮಣ್ಮು ವಂದಿಸಿದರು. ಮಾಜಿ ತಾಪಂ ಅಧ್ಯಕ್ಷೆ ವರೋನಿಕಾ ಕರ್ನೆಲಿಯೋ ಮತ್ತು ಆಶಾ ಕಾರ್ಯಕ್ರಮ ನಿರೂಪಿಸಿದರು.