ಫೆ.20ರಂದು ‘ಪ್ರಜಾಭಾರತ’ ರಾಜ್ಯಮಟ್ಟದ ಜನಜಾಗೃತಿ ಅಭಿಯಾನ ಉದ್ಘಾಟನೆ
ಉಡುಪಿ, ಫೆ.18: ಕರ್ನಾಟಕ ಮುಸ್ಲಿಂ ಜಮಾಅತ್ ಆಶ್ರಯದಲ್ಲಿ ‘ಪ್ರಜಾ ಭಾರತ’ ರಾಜ್ಯಮಟ್ಟದ ಜನಜಾಗೃತಿ ಅಭಿಯಾನದ ಉದ್ಘಾಟನಾ ಸಮಾರಂಭ ವನ್ನು ವಿಶ್ವ ಸಾಮಾಜಿಕ ನ್ಯಾಯ ದಿನವಾದ ಫೆ.20ರಂದು ಉಡುಪಿಯ ಲಿಗಾಡೋ ಹೊಟೇಲಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಭಿಯಾನವನ್ನು ಬೆಳಗ್ಗೆ 10:30ಕ್ಕೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಉದ್ಘಾಟಿಸಲಿರುವರು. ಜಮಾಅತ್ ರಾಜ್ಯಾಧ್ಯಕ್ಷ ಮುಫ್ತಿ ಅನ್ವರ್ ಅಲೀ ಖಾದಿರಿ ರಾಮನಗರ ಅಧ್ಯಕ್ಷತೆ ವಹಿಸಲಿರುವರು. ಪ್ರಧಾನ ಕಾರ್ಯದರ್ಶಿ ಶಾಫಿ ಸಅದಿ ಬೆಂಗಳೂರು, ನಿವೃತ್ತ ಕೆಎಎಸ್ ಅಧಿಕಾರಿ ಇಜಾಝ್ ಅಹ್ಮದ್ ಬಳ್ಳಾರಿ ಮೊದಲಾದವರು ಭಾಗವಹಿಸಲಿರುವರು ಜಮಾಅತ್ ರಾಜ್ಯ ಉಪಾಧ್ಯಕ್ಷ ಅಬೂ ಸುಫಿಯಾನ್ ಇಬ್ರಾಹಿಂ ಮದನಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ವಿವಾದಾತ್ಮಕ ಪೌರತ್ವ ಸಂಬಂಧಿ ಕಾಯ್ದೆಗಳಿಂದ ಬಹುಜನ ಭಾರತೀಯರು ಆತಂಕಿತರಾಗಿರುವ ಹಿನ್ನೆಲೆಯಲ್ಲಿ ವಸ್ತುಸ್ಥಿತಿಯನ್ನು ಪರಾಮರ್ಶಿ ಸುವುದು, ಸಂವಿಧಾನವೇ ಪ್ರಶ್ನಿಸುತ್ತಿರುವ ಸಂದರ್ಭದಲ್ಲಿ ಅದರ ಸಂರಕ್ಷಣೆಗೆ ಅಗತ್ಯವಾದ ಮಾರ್ಗದರ್ಶನ ನೀಡುವುದು, ಜಾತಿ-ಮತ ಬೇಧವಿಲ್ಲದೆ ಭಾರತೀಯರೆಲ್ಲರೂ ಒಂದಾಗಬೇಕೆಂಬ ಸಂದೇಶವನ್ನು ಹರಡುವುದು ಈ ಅಭಿಯಾನದ ಉದ್ದೇಶ ವಾಗಿದೆ ಎಂದರು.
ದ್ವೇಷ ಬಿಟ್ಟು ದೇಶ ಕಟ್ಟು ಎನ್ನುವ ಧ್ಯೇಯವಾಕ್ಯದಡಿ ನಡೆಯುವ ಈ ಅಭಿಯಾನದ ಪ್ರಯುಕ್ತ ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳು ನಡೆಯ ಲಿವೆ. ಒಟ್ಟು 55 ದಿನಗಳ ಈ ಅಭಿಯಾನದ ಸಮಾರೋಪ ಸಮಾರಂಭವು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜಯಂತಿ ದಿನವಾದ ಎ.14ರಂದು ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ನಿರ್ವಹಣಾ ಸಮಿತಿ ಅಧ್ಯಕ್ಷ ಹಾಜಿ ಪಿ. ಅಬೂಬಕ್ಕರ್ ನೇಜಾರು, ಕೋಶಾಧಿಕಾರಿ ಸಯ್ಯಿದ್ ಫರೀದ್ ಸಾಬ್, ಜಿಲ್ಲಾ ಮುಸ್ಲಿಂ ಜಮಾಅತ್ ಉಪಾಧ್ಯಕ್ಷರಾದ ಶೇಖ್ ಮುಹಮ್ಮದ್ ನಯೀಮ್ ಕಟಪಾಡಿ, ಮುಹಮ್ಮದ್ ರಫೀಕ್, ಕಾರ್ಯದರ್ಶಿಗಳಾದ ಸುಬ್ಹಾನ್ ಅಹ್ಮದ್ ಹೊನ್ನಾಳ, ಕೆ.ಎ.ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಉಪಸ್ಥಿತರಿದ್ದರು.