ಗಂಗೊಳ್ಳಿ: ಅಪ್ರಾಪ್ತ ಬಾಲಕಿಯ ರಕ್ಷಣೆ
ಉಡುಪಿ, ಫೆ.18: ಬಾಲ್ಯ ವಿವಾಹಕ್ಕೆ ಸಜ್ಜಾಗಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ರಕ್ಷಿಸಿದೆ. ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಅಖಿಲ್ ಹೆಗ್ಡೆ ಘಟಕಕ್ಕೆ ಕರೆ ಮಾಡಿ ಬಾಲಕಿಯನ್ನು ರಕ್ಷಿಸುವಂತೆ ತಿಳಿಸಿದ್ದು, ಅದರಂತೆ ಗಂಗೊಳ್ಳಿಯ ಬಾಲಕಿಯ ಮನೆಗೆ ಬೇಟಿ ನೀಡಿ ವಿಚಾರಿಸಿದಾಗ ಬಾಲಕಿ ಸಂಬಂಧಿಕರ ಮನೆಯ ಹುಡುಗನನ್ನು ಪ್ರೀತಿಸುತಿದ್ದು, ಅವರ ಮನೆಯಲ್ಲಿಯೇ ವಾಸವಾಗಿರುವುದು ಗೊತ್ತಾಯಿತು.
ಬಾಲಕಿಗೆ 17 ವರ್ಷ ಪ್ರಾಯವಾಗಿದ್ದು, ಹುಡುಗನಿಗೆ 20 ವರ್ಷ ಪ್ರಾಯ ವಾಗಿತ್ತು. ಬಾಲ್ಯವಿವಾಹ, ಪೋಕ್ಸೋ ಕಾಯ್ದೆ ಬಗ್ಗೆ ಎರಡು ಕಡೆಯವರಿಗೆ ಅರಿವು ಮೂಡಿಸಿ ಬಾಲಕಿಯನ್ನು ರಕ್ಷಿಸಿ ಪುನರ್ವಸತಿಗಾಗಿ ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ನೀಡಿ ನಿಟ್ಟೂರಿನ ಬಾಲಕಿಯರ ಬಾಲಮಂದಿರದಲ್ಲಿ ದಾಖಲಿಸಲಾಯಿತು.
ಕಾರ್ಯಾಚರಣೆಯಲ್ಲಿ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಸದಾನಂದ ನಾಯಕ್, ಕಾನೂನು ಪರಿವೀಕ್ಷಣಾಧಿಕಾರಿ ಪ್ರಬಾಕರ ಆಚಾರ್, ಅಂಗನವಾಡಿ ಸೂಪರ್ವೈಸರ್ ರಾಜೇಶ್ವರಿ, ಅಂಗನವಾಡಿ ಟೀಚರ್ ಫಿಲೋಮಿನಾ ಪೆನಾರ್ಂಡಿಸ್ ಬಾಗವಹಿಸಿದ್ದರು.