ಪ್ರವಾದಿ ನಿಂದನೆ: ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದಿಂದ ದೂರು
ಕೊಣಾಜೆ: ಪ್ರವಾದಿ ನಿಂದನೆಯನ್ನು ಖಂಡಿಸಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದಿಂದ ಕೊಣಾಜೆ ಠಾಣೆಯಲ್ಲಿ ದೂರು ದಾಖಲಿಸಲಾಯಿತು.
ಈ ಸಂದರ್ಭ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಎನ್.ಎಸ್.ಕರೀಂ ಮಾತನಾಡಿ, ಹಿಂದೊಮ್ಮೆ ಮಾಧ್ಯಮ ಪ್ರತಿನಿಧಿಯೋರ್ವರು ನಿಂದನೆ ಮಾಡಿದಾಗ ಯಾವುದೇ ಕಾನೂನು ಕ್ರಮ ಆಗಿರಲಿಲ್ಲ, ಇದೀಗ ಮಧುಗಿರಿ ಮೋದಿ ಎನ್ನುವ ಹೆಸರಿಟ್ಟುಕೊಂಡ ವ್ಯಕ್ತಿ ನಿಂದನೆ ಮಾಡಿದ್ದು ಇಂತಹ ಕೃತ್ಯ ಸಹಿಸಲು ಸಾಧ್ಯವಿಲ್ಲ, ಈ ಪ್ರಕರಣದಲ್ಲಿ ಕೈಗೊಳ್ಳುವ ಕ್ರಮ ಸಮಾಜದಲ್ಲಿ ಸಾಮರಸ್ಯ ಕದಡುವವರಿಗೆ ಪಾಠವಾಗಬೇಕು ಎಂದು ಹೇಳಿದರು.
ಉಳ್ಳಾಲ ಘಟಕಾಧ್ಯಕ್ಷ ಆಲ್ವಿನ್ ಡಿ'ಸೋಜ, ಈಗ ನಡೆದಿರುವ ಪ್ರಕರಣ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸದಿದ್ದರೆ ಇಂತಹ ಪ್ರಕರಣ ನಿರಂತರ ನಡೆದು ಸಮಾಜದಲ್ಲಿ ಅಶಾಂತಿಗೆ ಕಾರಣವಾಗಬಹುದು, ಈ ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಂಡು ಜೈಲಿಗೆ ಅಟ್ಟದಿದ್ದಲ್ಲಿ ಉಗ್ರ ಹೋರಾಟ ಮಾಡುವುದು ಅನುವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಬ್ಲಾಕ್ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಮೇಗಾ ಸಲೀಂ ಅಸೈಗೋಳಿ, ಬೆಲ್ಮ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿ.ಎಂ.ಸತ್ತಾರ್, ಪದಾಧಿಕಾರಿಗಳಾದ ಜಮಾಲ್ ಅಜ್ಜಿನಡ್ಕ, ಮುನೀರ್ ಬಾವ, ಮುಹಮ್ಮದ್ ಪುಷ್ಠಿ, ಅಹ್ಮದ್ ಅಜ್ಜಿನಡ್ಕ, ಝಕರಿಯಾ ಮಲಾರ್, ಬಾತಿಷ್ ಅಜ್ಜಿನಡ್ಕ, ಪಿ.ಎಚ್.ಇಸ್ಮಾಯಿಲ್, ಅಶ್ರಫ್ ಕಶ್ವ ಮೊದಲಾದವರು ಉಪಸ್ಥಿತರಿದ್ದರು.