ಗೋಲ್ಡನ್ ಬಣ್ಣದೊಂದಿಗೆ ಕುದ್ರೋಳಿ ಕ್ಷೇತ್ರ ಶಿವರಾತ್ರಿಗೆ ಸಜ್ಜು
ಮಂಗಳೂರು, ಫೆ. 19: ಕುದ್ರೋಳಿಯ ಗೋಕರ್ಣನಾಥ ಕ್ಷೇತ್ರವು ಸಂಪೂರ್ಣ ಸ್ವರ್ಣ ಬಣ್ಣದೊಂದಿಗೆ ಶಿವರಾತ್ರಿಯನ್ನು ಆಚರಿಸಲು ಸಜ್ಜುಗೊಂಡಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಕ್ಷೇತ್ರದ ನವೀಕರಣದ ರುವಾರಿ ಹಾಗೂ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ, ಕಳೆದ ನವರಾತ್ರಿ ಉತ್ಸವದ ಸಂದರ್ಭ ಸಂಪೂರ್ಣ ದೇವಾಲಯವನ್ನು ಗೋಲ್ಡನ್ ಬಣ್ಣದಲ್ಲಿ ಅಲಂಕರಿಸುವ ಕಾರ್ಯ ಆರಂಭಗೊಂಡಿದ್ದು, ಇದೀಗ ಪೂರ್ತಿಗೊಂಡಿದೆ ಎಂದರು.
ದೇವಸ್ಥಾನದ ಧ್ವಜಸ್ತಂಭ ಕೂಡಾ ಬಂಗಾರದ ಬಣ್ಣವನ್ನು ಹೊಂದಿರುವುದು ಕುದ್ರೋಳಿ ಕ್ಷೇತ್ರದ ವಿಶೇಷತೆ. ಈ ಬಾರಿಯ ಶಿವರಾತ್ರಿ ಉತ್ಸವದ ಸಂದರ್ಭದಲ್ಲಿ ದೇವಸ್ಥಾನದ ಪರಿವಾರ ದೇವರುಗಳ ಮಂದಿರಗಳನ್ನು ಕೂಡಾ ಕೂಡಾ ಗೋಲ್ಡನ್ ಬಣ್ಣದಿಂದ ಸುಂದರಗೊಳಿಸಲಾಗಿದೆ. ಶಬರಿಮಲೆಯಲ್ಲಿ ಅಯ್ಯಪ್ಪನ ಮಂದಿರ, ಅಮೃತ ಸರದಲ್ಲಿ ಗುರುನಾನಕ್ ಮಂದಿರ ಗೋಲ್ಡನ್ ಟೆಂಪಲ್ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಅದಲ್ಲದೆ ಚೆನ್ನೈನಲ್ಲಿ ಸ್ವಾಮೀಜಿಯೊಬ್ಬರು ನೀರಿನ ಮಧ್ಯದಲ್ಲಿ ಸ್ವರ್ಣ ಮಂದಿರವನ್ನು ನಿರ್ಮಿಸಿದ್ದಾರೆ. ಅಲ್ಲಿಗೆ ಭೇಟಿ ನೀಡಿದ್ದೆ. ಇದೀಗ ಕುದ್ರೋಳಿ ಕ್ಷೇತ್ರ ಕೂಡಾ ಸುವರ್ಣ ಬಣ್ಣದಿಂದ ಭಕ್ತರ ಕಣ್ಮನ ಸೆಳೆಯಲಿದೆ ಎಂದರು.
ಕ್ಷೇತ್ರದಲ್ಲಿ ಈಗಾಗಲೇ ಶಿವರಾತ್ರಿ ಉತ್ಸವದ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಫೆ. 23ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಣೆ ನಡೆಯಲಿದೆ. 21ರಂದು ರಾತ್ರಿ 1 ಗಂಟೆಗೆ ಮಹಾಶಿವರಾತ್ರಿ ಜಾಗರಣೆ ಬಲಿ ನಡೆಯಲಿದೆ. ಫೆ. 22ರಂದು ಮಧ್ಯಾಹ್ನ 1 ಗಂಟೆಗೆ ಮಹಾ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಕ್ಷೇತ್ರದಾಡಳಿ ಮಂಡಳಿ ಕೋಶಾಧಿಕಾರಿ ನ್ಯಾಯವಾದಿ ಪದ್ಮರಾಜ್ ಆರ್. ತಿಳಿಸಿದರು.
ಗೋಷ್ಠಿಯಲ್ಲಿ ಮಂಡಳಿ ಅಧ್ಯಕ್ಷ ಎಚ್.ಎಸ್. ಸಾಯಿರಾಮ್, ಕಾರ್ಯದರ್ಶಿ ಮಾಧವ ಸುವರ್ಣ, ಸದಸ್ಯರಾದ ರವಿಶಂಕರ್ ಮಿಜಾರ್, ಮಹೇಶ್ಚಂದ್ರ್ರ, ದೇವೇಂದ ಪೂಜಾರಿ, ಡಾ. ಬಿ.ಜಿ. ಸುವರ್ಣ, ಡಾ. ಅನಸೂಯ, ಚಿತ್ತರಂಜನ್ ಗರೋಡಿ, ಶೇಖರ ಪೂಜಾರಿ, ಕರುಣಾಕರ ಶೆಟ್ಟಿ , ಎಸ್. ಜಯವಿಕ್ರಮ್, ಮೋಹನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.