ಶಿವಾಜಿ ಯುವಜನತೆಗೆ ಪ್ರೇರಕ ಶಕ್ತಿ: ಸದಾಶಿವ ಪ್ರಭು
ಉಡುಪಿ, ಫೆ.19: ಛತ್ರಪತಿ ಶಿವಾಜಿ ಮಹಾರಾಜರ ಧೈರ್ಯ, ಆದರ್ಶ ಮತ್ತು ಶೌರ್ಯ ಸಾಹಸಗಳು ಯುವ ಜನತೆಗೆ ಸಾಧನೆ ಮಾಡಲು ಪ್ರೇರಕ ಶಕ್ತಿ ನೀಡುತ್ತವೆಎಂದು ಉಡುಪಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹೇಳಿದ್ದಾರೆ.
ಬುಧವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ವತಿಯಿಂದ ನಡೆದ ಛತ್ರಪತಿ ಶಿವಾಜಿ ಜಯಂತಿ ಆಚರಣೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡುತಿದ್ದರು.
ಶಿವಾಜಿ ಅವರ ಧೈರ್ಯ ಸಾಹಸಗಳು, ಭಾರತದ ಸ್ವಾತಂತ್ರ ಸಂಗ್ರಾಮದ ಹಲವು ಹೋರಾಟಗಾರರಿಗೆ ಸಹ ಸ್ಪೂರ್ತಿ ನೀಡಿದ್ದವು. ಶಿವಾಜಿ ಯುವಜನತೆಗೆ ಪ್ರೇರಕ ಶಕ್ತಿಯಾಗಿದ್ದು, ಯುವಜನತೆ ಶಿವಾಜಿಯ ಆದರ್ಶಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಸದಾಶಿವ ಪ್ರಭು ನುಡಿದರು.
ನಶಿಸಿ ಹೋಗುವ ಹಂತದಲ್ಲಿದ್ದ ಹಿಂದೂ ಧರ್ಮದ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿದ ಶ್ರೇಯಸ್ಸು ಶಿವಾಜಿ ಮಹಾರಾಜರಿಗೆ ಸಲ್ಲುತ್ತದೆ. ಉತ್ತಮ ಆಡಳಿತಗಾರ ಹಾಗೂ ಹೋರಾಟಗಾರರಾಗಿದ್ದ ಶಿವಾಜಿ ಅವರ ಆಡಳಿತದಲ್ಲಿ ಪ್ರಜಾಪ್ರುತ್ವದ ಕಲ್ಪನೆ ಹಾಗೂ ಜಾತ್ಯಾತೀತ ನ್ಯಾಯ ಕಾಣಬಹುದು. ಶಿವಾಜಿ ಆದರ್ಶಗಳನ್ನು ಬಾಲ್ಯದಿಂದಲೇ ಮಕ್ಕಳಿಗೆ ಹೇಳಿ ಕೊಡುವ ಮೂಲಕ ಮುಂದಿನ ಪೀಳಿಗೆಗೆ, ಅವರ ಆದರ್ಶಗಳನ್ನು ತಲುಪಿಸುವ ಕಾರ್ಯವನ್ನು ಮಾಡಬೇಕು ಎಂದು ಮರಾಠ ಸಮು ದಾಯದ ದಿನೇಶ್ ನಾಯಕ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಡಿಡಿಪಿಐ ಶೇಷಶಯನ ಕಾರಿಂಜ, ಮರಾಠ ಸಮುದಾಯದ ಮುಖಂಡರಾದ ಪ್ರಕಾಶ್ರಾವ್ ಕವಡೆ, ಕೇಶವ್ರಾವ್ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿ, ವಂದಿಸಿದರು.