ಹಾವೇರಿ ಮೂಲದ ಬಾಲಕನ ರಕ್ಷಣೆ
ಉಡುಪಿ, ಫೆ.20: ರೈಲಿನಲ್ಲಿ ಟಿಕೇಟು ಇಲ್ಲದೆ ಸಂಚರಿಸುತ್ತಿದ್ದ ವೇಳೆ ಇಂದ್ರಾಳಿ ರೈಲ್ವೆ ಆರ್ಪಿಎಫ್ ಅಧಿಕಾರಿಗಳು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ನೆರವಿನಿಂದ ಹಾವೇರಿ ಮೂಲದ ಬಾಲಕನೊಬ್ಬನನ್ನು ರಕ್ಷಿಸಿದ್ದಾರೆ.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬಾಲಕ ನೊಂದಿಗೆ ಸಮಾಲೋಚನೆ ನಡೆಸಿ ಮಾಹಿತಿ ಸಂಗ್ರಹಿಸಿದರು. ಈ ಬಾಲಕ 10ನೇ ತರಗತಿ ಓದುತ್ತಿದ್ದು, ಮನೆಯಲ್ಲಿ ಪೋಷಕರ ಪ್ರೀತಿ ಕೊರತೆಯಿಂದ ಮನೆ ಬಿಟ್ಟಿರುವುದಾಗಿ ತಿಳಿಸಿದ. ನಂತರ ಪೋಷಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅವರು ಬಂದು ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದರಿಂದ, ತಾತ್ಕಾಲಿಕವಾಗಿ ಕುಕ್ಕಿಕಟ್ಟೆ ಕೃಷ್ಣ ಬಾಲನಿಕೇತನದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಸದಾನಂದ ನಾಯಕ್, ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಸಮಾಜ ಕಾರ್ಯಕರ್ತ ಯೋಗೀಶ್, ಆರ್ಪಿಎಫ್ ಇನ್ಸ್ಪೆಕ್ಟರ್ ಸಂತೋಷ್ ಗಾವಂಕರ್, ಎಎಸ್ಐ. ಶ್ರೀಕಾಂತ್ ಕೂಟೆ ಭಾಗವಹಿಸಿದ್ದರು.
Next Story