ಫೆ. 23ರಿಂದ ಪಳ್ಳಿತ್ತಡ್ಕ ದರ್ಗಾ ಉರೂಸ್
ಪುತ್ತೂರು: ತಾಲೂಕಿನ ಇರ್ದೆ ಪಳ್ಳಿತ್ತಡ್ಕ ದರ್ಗಾ ಶರೀಫ್ 44ನೇ ಉರೂಸ್ ಕಾರ್ಯಕ್ರಮ ಮತ್ತು 7 ದಿವಸಗಳ ಧಾರ್ಮಿಕ ಮತ ಪ್ರಭಾಷಣ ಫೆ.23 ರಿಂದ 29ರ ತನಕ ನಡೆಯಲಿದೆ ಎಂದು ಕೊರಿಂಗಿಲ ಜಮಾಅತ್ ಸಲಹಾ ಸಮಿತಿ ಸದಸ್ಯ ಆಲಿಕುಂಞಿ ಕೊರಿಂಗಿಲ ತಿಳಿಸಿದ್ದಾರೆ.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಫೆ.23ರಂದು ಕೊರಿಂಗಿಲ ಇಮಾಂ ಜೆ.ಎಮ್ ಅಲ್ಹಾಜ್ ಜಿ.ಎಚ್ ಅಯ್ಯೂಬ್ ವಅಬಿ ಗಡಿಯಾರ ಅವರು ಉರೂಸ್ ಸಮಾರಂಭ ಉದ್ಘಾಟಿಸಲಿದ್ದಾರೆ. ಅರಿಕ್ಕೋಡ್ ಅರಬಿ ಕಾಲೇಜಿನ ನಿರ್ದೇಶಕ ಶಾಫಿ ಸಖಾಫಿ ಮುಂಡಂಬ್ರ ಅವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಫೆ. 24ರಂದು ಪತ್ತನಾಪುರಂ ಅಲ್ ಹಾಫಿಳ್ ಇ.ಪಿ. ಅಬೂಬಕ್ಕರ್ ಅಲ್ ಖಾಸಿಮಿ, ಫೆ. 25ರಂದು ಪೋಯ್ಯತ್ತಬೈಲ್ ಮುದರ್ರಿಸ್ ಅಬ್ದುಲ್ ಜಬ್ಬಾರ್ ಸಖಾಫಿ, ತೂದ ಪೇರಾಂಬ್ರ ಸ್ವಾಲಿಹ್ ಹುದವಿ ಫೆ. 26ರಂದು ಪ್ರೇರಾಂಬ್ರ ಸ್ವಾಲಿಹ್ ಹುದವಿ, ಫೆ. 27ರಂದು ಕಿಲ್ಲೂರು ಅಬ್ದುಲ್ ಹಮೀದ್ ಫೈಝಿ, ಫೆ. 28ರಂದು ಪಾಣತ್ತೂರು ಅಬ್ದುಲ್ ಅಝೀಝ್ ಅಶ್ರಫಿ ಅವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ಹೇಳಿದರು.
ಪುತ್ತೂರು ಕೇಂದ್ರ ಜುಮಾ ಮಸ್ಜಿದ್ನ ಮುದರ್ರಿಸ್ ಅಸ್ಸಯ್ಯದ್ ಅಹ್ಮದ್ ಪುಕೋಯ ತಂಙಳ್ ಅವರು ದುಃವಾ ಆಶೀರ್ವಚನ ನೀಡಲಿದ್ದಾರೆ ಎಂದ ಅವರು ಫೆ. 29ರಂದು ಸಂಜೆ ಸಮಾರೋಪ ಸಮಾರಂಭವು ಕೊರಿಂಗಿಲ ಇಮಾಂ ಅಲ್ಹಾಜ್ ಅಯ್ಯೂಬ್ ವಹಬಿ ಅವರ ನೇತೃತ್ವದಲ್ಲಿ ಜರುಗಲಿದೆ. ಸಯ್ಯದ್ ಹಾಶಿಂ ಬಾಅಲವಿ ತಂಙಳ್ ಅವರು ಸೌಹಾರ್ದ ಸಂಗಮವನ್ನು ಉದ್ಘಾಟಿಸಲಿದ್ದು, ಕಾವಲ್ಕಟ್ಟೆ ಕ್ವಾದಿಸ ಕಾಲೇಜ್ನ ಪ್ರಾಂಶುಪಾಲ ಅಲ್ ಹಾಫಿಲ್ ಸುಫಿಯಾನ್ ಸಖಾಫಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಉರೂಸ್ ಕಾರ್ಯಕ್ರಮಕ್ಕೆ ಸ್ಥಳವಕಾಶ ನೀಡುತ್ತಿರುವ ನ್ಯಾಯವಾದಿ ರಾಧಾಕೃಷ್ಣ ರೈ ಆನಾಜೆ, ಶಾಸಕ ಸಂಜೀವ ಮಠಂದೂರು, ಉಳ್ಳಾಲ ಶಾಸಕ ಯು.ಟಿ.ಖಾದರ್ ಸೇರಿದಂತೆ ಅನೇಕ ಮಂದಿ ಗಣ್ಯರು ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ರಾತ್ರಿ ಉರೂಸ್ ಸಮಾರಂಭ
ರಾತ್ರಿ ಗಂಟೆ 8ರಿಂದ ಉರೂಸ್ ಸಮಾರಂಭ ನಡೆಯಲಿದ್ದು, ಎಸ್.ವೈ.ಎಸ್ ಕೇರಳದ ಪ್ರಧಾನ ಕಾರ್ಯದರ್ಶಿ ಅಬ್ದುಸ್ಸಮದ್ ಪೂಕಟೂರು ಅವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಅಸ್ಸಯ್ಯದ್ ಕೆ.ಎಸ್ ಅಟಿಕೋಯ ತಂಙಳ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ರಾತ್ರಿ ಉರೂಸ್ ಕಾರ್ಯಕ್ರಮದ ಕೊನೆಗೆ ಅನ್ನದಾನ ನಡೆಯಲಿದ್ದು, 7 ದಿವಸಗಳಲ್ಲಿ ಹಗಲು ದರ್ಗಾದ ವಠಾರದಲ್ಲಿ ಬೆಲ್ಲದ ಗಂಜಿ, ಸೀರಣಿ ಪ್ರಸಾದ ರೂಪದಲ್ಲಿ ವಿತರಣೆ ಮಾಡಲಾಗುವುದು ಎಂದು ಕೊರಿಂಗಿಲ ಜಮಾಅತ್ ಕಮಿಟಿ ಅಧ್ಯಕ್ಷ ಮಹಮ್ಮದ್ ಕುಂಞಿ ಹಾಜಿ ಕೊರಿಂಗಿಲ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಮಾಅತ್ ಸಮಿತಿ ಕಾರ್ಯದರ್ಶಿ ಕಾಸಿಂ ಕೇಕಣಾಜೆ, ಉರೂಸ್ ಸಮಿತಿ ಉಪಾಧ್ಯಕ್ಷ ಕೆ.ಎಮ್.ಹಮೀದ್, ಜೊತೆ ಕಾರ್ಯದರ್ಶಿ ಅಶ್ರಫ್ ಉಪಸ್ಥಿತರಿದ್ದರು.