ಬರಗಾಲದ ನಡುವೆಯೂ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಯತ್ನ: ಸಚಿವ ಡಿಕೆಶಿ
ಕ್ಯಾಂಪ್ಕೊ ವಿದ್ಯುತ್ ಉಪಕೇಂದ್ರ ಉದ್ಘಾಟನೆ
ಪುತ್ತೂರು, ಮೇ 20: ರಾಜ್ಯದಲ್ಲಿ ಈ ಬಾರಿ ಉಂಟಾದ ಬರಗಾಲದ ನಡುವೆಯೂ ವಿದ್ಯುತ್ ಸಮಸ್ಯೆ ಉಂಟಾಗದಂತೆ ಎಚ್ಚರ ವಹಿಸಿ ಪರಿಹರಿಸಲಾಗಿದೆ. ವಿದ್ಯುತ್ ಬೇಡಿಕೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಉತ್ಪಾದನೆಯ ಪ್ರಯತ್ನಗಳನ್ನು ಹಿಂದಿನ ಅವಧಿಯಲ್ಲಿ ಮಾಡಿಲ್ಲದ ಕಾರಣ ಇದೊಂದು ಸವಾಲಿನ ಕ್ಷೇತ್ರವಾಗಿ ಪರಿಣಮಿಸಿದೆ ಎಂದು ರಾಜ್ಯ ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
ಅವರು ಶುಕ್ರವಾರ ಮಂಗಳೂರು ವಿದ್ಯುಚ್ಛ್ಚಕ್ತಿ ಸರಬರಾಜು ಕಂಪೆನಿ ವತಿಯಿಂದ ಪುತ್ತೂರಿನ ಕ್ಯಾಂಪ್ಕೊ ಆವರಣದಲ್ಲಿ ಆರಂಭಿಸಲಾದ 33/22 ಕೆ.ವಿ. ವಿದ್ಯುತ್ ಉಪಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಸೋಲಾರ್ ಮೂಲಕ 5ಸಾವಿರ ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿ ಹೊಂದಲಾಗಿದ್ದು, ಈಗಾಗಲೇ ಪಾವಗಡದಲ್ಲಿ 2ಸಾವಿರ ಮೆ.ವ್ಯಾಟ್ನ ಸೋಲಾರ್ ಪಾರ್ಕ್ ನಿರ್ಮಾಣ ಕಾರ್ಯವನ್ನು ಕೇಂದ್ರ ಸರಕಾರದ ನೆರವಿನೊಂದಿಗೆ ಮಾಡಲಾಗುವುದು. ಉಳಿದಂತೆ ಪ್ರತಿಯೊಂದು ತಾಲೂಕಿನಲ್ಲಿ ಸೋಲಾರ್ ಕೇಂದ್ರ ನಿರ್ಮಾಣ ಮಾಡಲಾಗುತ್ತಿದೆ. ದ.ಕ. ಜಿಲ್ಲೆಯಲ್ಲಿ ಸೋಲಾರ್ ಕೇಂದ್ರ ನಿರ್ಮಾಣಗೊಳಿಸಲು ಅವಕಾಶವಿದ್ದಲ್ಲಿ ಉಸ್ತುವಾರಿ ಸಚಿವರ ಸಹಕಾರದಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದರು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮಾತನಾಡಿ, ಮೆಸ್ಕಾಂ ರಚನೆಗೊಂಡ ಬಳಿಕ ಅನೇಕ ಉತ್ತಮ ಬದಲಾವಣೆಗಳಾಗಿದ್ದು, ಹಲವಾರು ಉಪಕೇಂದ್ರಗಳಾಗಿವೆ ಹಾಗೂ ಇಲಾಖೆಯ ದಕ್ಷತೆ ಹೆಚ್ಚಾಗಿದೆ. ಮಂಗಳೂರು ಬಂಟ್ವಾಳದ ನಡುವೆ 220 ಕೆ.ವಿ. ರಿಸೀವರ್ ನಿರ್ಮಾಣಗೊಂಡಲ್ಲಿ ಜಿಲ್ಲೆಯ ಬಹುತೇಕ ವಿದ್ಯುತ್ ಸಮಸ್ಯೆ ಪರಿಹಾರವಾಗಲಿದೆ. ಈ ನಿಟ್ಟಿನಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಅವರು ಪ್ರಯತ್ನ ನಡೆಸಬೇಕು ಎಂದರು.
ವಿದ್ಯುತ್ ಲೈನ್ ಆಗಬೇಕಾಗಿರುವ ಸಂದರ್ಭದಲ್ಲಿ ಆ ಭಾಗದ ರೈತರ ಜಮೀನು ವಶಪಡಿಸಿಕೊಳ್ಳುವ ಅಧಿಕಾರ ಜಿಲ್ಲಾಧಿಕಾರಿಗಳಿಗಿದೆ. ಇಂತಹ ಕಾರ್ಯಗಳಿಗೆ ನಾಗರಿಕರು ಸಹಕಾರ ನೀಡಬೇಕು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಪುತ್ತೂರಿನಲ್ಲಿ ಸಾಕಷ್ಟು ವಿದ್ಯುತ್ ಕೊರತೆಗಳಿದ್ದು, ಮಾಡಾವು 110 ಕೆ.ವಿ ಉಪಕೇಂದ್ರ ಆರಂಭಗೊಂಡು 3 ವರ್ಷಗಳು ಕಳೆದಿದ್ದರೂ ಕಾಮಗಾರಿ ಪೂರ್ಣಗೊಳ್ಳದೆ ಅರ್ಧದಲ್ಲಿ ಬಾಕಿಯಾಗಿದೆ. ತಕ್ಷಣವೇ ಇಂಧನ ಸಚಿವರು ಸಂಬಂಧಿಸಿದ ಕಂಟ್ರಾಕ್ಟರ್ಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯನ್ನು ಪರಿಹರಿಸಬೇಕು. ಪುತ್ತೂರಿನಲ್ಲಿ ಲೈನ್ ಸಮಸ್ಯೆಗಳಾದಾಗ ಮಂಗಳೂರಿನಿಂದ ಗ್ಯಾಂಗ್ಮೆನ್ ಬಂದು ದುರಸ್ತಿ ಮಾಡುವ ಕಾರಣ ಹೆಚ್ಚಿನ ಸಮಯ ವ್ಯರ್ಥವಾಗುತ್ತಿದೆ. ಇದನ್ನು ತಡೆಯಲು ಪುತ್ತೂರಿಗೆ ಗ್ಯಾಂಗ್ಮೆನ್ ವ್ಯವಸ್ಥೆಗೊಳಿಸಬೇಕು.
ಕಾವು ಎಂಬಲ್ಲಿಗೆ 33ಕೆ.ವಿ. ವಿದ್ಯುತ್ ಉಪಕೇಂದ್ರ ಮಂಜೂರಾಗಿದ್ದು ಕೆಲಸ ಇನ್ನೂ ಆರಂಭಗೊಂಡಿಲ್ಲ, ವಿದ್ಯುತ್ ಕಂಬ ದುರಸ್ತಿ ವೇಳೆಗೆ ಹಲವಾರು ಅಪಾಯಗಳು ಸಂಭವಿಸುತ್ತಿದ್ದು ಜೀವಹಾನಿಯೂ ಉಂಟಾಗಿದೆ. ಇದನ್ನು ತಡೆಲು ಕಂಬ ಲಿಫ್ಟ್ ಮಾಡುವ ಹಾಗೂ ದುರಸ್ತಿಗೊಳಿಸುವ ಕ್ರೇನ್ ವ್ಯವಸ್ಥೆಯನ್ನು ಪುತ್ತೂರಿಗೆ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಪಂ. ಅಧ್ಯಕ್ಷೆ ಭವಾನಿ ಚಿದಾನಂದ, ಉಪಾಧ್ಯಕ್ಷೆ ರಾಜೇಶ್ವರಿ, ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು, ಉಪಾಧ್ಯಕ್ಷ ವಿಶ್ವನಾಥ ಗೌಡ, ಸದಸ್ಯ ಮುಖೇಶ್ ಕೆಮ್ಮಿಂಜೆ, ಪುಡಾ ಅಧ್ಯಕ್ಷ ಈಶ್ವರ ಭಟ್ ಬೆಟ್ಟ, ಕೆಪಿಟಿಸಿಎಲ್ ನಿರ್ದೇಶಕ ಜಯರಾಮೇಗೌಡ, ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಸಚಿವರ ಕಾರ್ಯದರ್ಶಿ ಶ್ರಿಧರ್, ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಮೆಸ್ಕಾಂ ನಿರ್ದೇಶಕಿ ಮಲ್ಲಿಕಾ ಪಕ್ಕಳ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಚಿವ ಡಿ.ಕೆ.ಶಿವಕುಮಾರ್, ಉಪಕೇಂದ್ರ ನಿರ್ಮಾಣಕ್ಕೆ ಸ್ಥಳಾವಕಾಶ ನೀಡಿದ ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಮತ್ತು ಕಾಮಗಾರಿ ನಿರ್ವಹಿಸಿದ ಕುಂದಾಪುರ ಪುಷ್ಪಾಇಲೆಕ್ಟ್ರಿಕಲ್ಸ್ನ ಪುಷ್ಪಾನಂದ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಿದರು.
ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಚಿಕ್ಕನಂಜಪ್ಪ ಸ್ವಾಗತಿಸಿದರು. ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ನಾರಾಯಣ ಪೂಜಾರಿ ವಂದಿಸಿದರು. ಪ್ರೊ. ಬಿ.ಜೆ. ಸುವರ್ಣ ಕಾರ್ಯಕ್ರಮ ನಿರೂಪಿಸಿದರು.