ನಿಟ್ಟೂರು: ಉಚಿತ ಕಣ್ಣು -ಹಲ್ಲು ತಪಾಸಣಾ ಶಿಬಿರ
ಉಡುಪಿ, ಫೆ.23: ಮಣಿಪಾಲ ಕಾಲೇಜ್ ಆಪ್ ಡೆಂಟಲ್ ಸೈನ್ಸ್ ಮತ್ತು ಮಣಿಪಾಲ ಕೆಎಂಸಿ ಆಸ್ಪತ್ರೆ(ಕಣ್ಣಿನ ವಿಭಾಗ)ಯ ಸಹಯೋಗದಲ್ಲಿ ಇತ್ತೀಚೆಗೆ ನಿಧನರಾದ ಉಡುಪಿಯ ನಿಟ್ಟೂರು ಪ್ರೌಢಶಾಲೆಯ ಹಳೆವಿದ್ಯಾರ್ಥಿ ಶಶಿಕಾಂತ ಶಿವತ್ತಾಯರ ಸ್ಮರಣಾರ್ಥ ಶಾಲಾ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಉಚಿತ ಕಣ್ಣು ಮತ್ತು ಹಲ್ಲು ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ರವಿವಾರ ಶಾಲೆಯಲ್ಲಿ ಆಯೋಜಿಸಲಾಗಿತ್ತು.
ಶಿಬಿರವನ್ನು ಹಳೆ ವಿದ್ಯಾರ್ಥಿಗಳಾದ ಡಾ.ಅಶೋಕ್ ಕುಮಾರ್ ಶೆಟ್ಟಿ ಮತ್ತು ಡಾ.ರಮೇಶ್ ಹೊಳ್ಳ ಉದ್ಘಾಟಿಸಿದರು. ಮಣಿಪಾಲ ಕೆಎಂಸಿಯ ವೈದ್ಯೆ ಡಾ. ವಿದ್ಯಾಸರಸ್ವತಿ ಹಲ್ಲು ಮತ್ತು ಬಾಯಿಯ ಆರೋಗ್ಯದ ಕುರಿತು ಹಾಗೂ ಕೆಎಂಸಿ ಕಣ್ಣಿನ ವಿಭಾಗದ ತಜ್ಞ ವೈದ್ಯೆ ಡಾ.ಶೈಲಜಾ ಕಣ್ಣಿನ ಆರೋಗ್ಯದ ಕುರಿತು ಮಾಹಿತಿ ನೀಡಿರು.
ಈ ಸಂದರ್ಭದಲ್ಲಿ ಲೆಕ್ಕಪರಿಶೋಧಕರ ಸಂಘ ಉಡುಪಿ ಘಟಕದ ಅಧ್ಯಕ್ಷರಾಗಿ ಆಯ್ಕೆಗೊಂಡ ಶಾಲಾ ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರದೀಪ್ ಜೋಗಿ ಅವರನ್ನು ಸನ್ಮಾನಿಸಲಾಯಿತು. ಸುವರ್ಣಪರ್ವದ ಅಧ್ಯಕ್ಷ ಯೋಗೀಶ್ಚಂದ್ರಾಧರ, ಉಡುಪಿ ನಗರಸಭಾ ಸದಸ್ಯ ಪ್ರಭಾಕರ ಪೂಜಾರಿ, ಆಡಳಿತ ಮಂಡಳಿಯ ಜೊತೆಕಾರ್ಯದರ್ಶಿ ದಿನೇಶ್ ಪಿ.ಪೂಜಾರಿ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯ ಮುರಲಿ ಕಡೆಕಾರ್ ಪಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಶಿಕ್ಷಕ ದೇವದಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ದರು. ಕಾರ್ಯ ದರ್ಶಿ ಪ್ರದೀಪ್ ಜೋಗಿ ವಂದಿಸಿದರು. ತಜ್ಞ ವೈದ್ಯರ ತಂಡ ಈ ಶಿಬಿರದಲ್ಲಿ ಪಾಲ್ಗೊಂಡಿದ್ದು, ವಿದ್ಯಾರ್ಥಿಗಳು, ಪೋಷಕರು ಮತ್ತು ಹಳೆವಿದ್ಯಾರ್ಥಿಗಳು ಸೇರಿದಂತೆ ಸುಮಾರು 500 ಮಂದಿ ಈ ಶಿಬಿರದ ಸದುಪಯೋಗ ಪಡೆದು ಕೊಂಡರು