ಫೆ.26: ಉಪ್ಪಿನಂಗಡಿಯಲ್ಲಿ ಮುಕ್ರಿ ಕುಟುಂಬಸ್ಥರ ಸಮ್ಮಿಲನ
ಉಪ್ಪಿನಂಗಡಿ, ಫೆ.24: ಹದಿನೆಂಟನೇ ಶತಮಾನದಲ್ಲಿ ಉಪ್ಪಿನಂಗಡಿಗೆ ಆಗಮಿಸಿದ ಮುಕ್ರಿ ಮನೆತನದ ಮಂದಿಯನ್ನು ಒಗ್ಗೂಡಿಸುವ ಹಿನ್ನೆಲೆಯಲ್ಲಿ ಉಪ್ಪಿನಂಗಡಿಯ ಎಚ್.ಎಂ. ಅಡಿಟೋರಿಯಂನಲ್ಲಿ ಫೆ.26ರಂದು ಮುಕ್ರಿ ಕುಟುಂಬಸ್ಥರ ಸಮ್ಮಿಲನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮುಕ್ರಿ ಕುಟುಂಬದ ಜಲೀಲ್ ಮುಕ್ರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ದೇಶ ಹಾಗೂ ಹೊರದೇಶಗಳಲ್ಲಿ ನೆಲೆಸಿರುವ ಮುಕ್ತಿ ಕುಟುಂಬದ ಸದಸ್ಯರೆಲ್ಲರನ್ನೂ ಒಗ್ಗೂಡಿಸುವುದರೊಂದಿಗೆ ಕುಟುಂಬ ಸದಸ್ಯರ ಚಾರಿಟೇಬಲ್ ಟ್ರಸ್ಟ್ನ್ನು ರಚಿಸಿ ಅಸಹಾಯಕ ಬಂಧುಗಳಿಗೆ ನೆರವು ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಸಮಾರಂದಲ್ಲಿ ಅಕ್ಷರ ಸಂತ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬರನ್ನು ಅಭಿನಂದಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 9 ಗಂಟೆಗೆ ನೋಂದಣಿಯೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಲೋಗೋ ಅನಾವರಣ, ಇಸ್ಲಾಮಿಕ್ ಕಲಾ ಸ್ಪರ್ಧೆ, ಕ್ವಿಝ್ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಕ್ರಿ ಸಂತತಿಯ ಸುಹೈಲ್, ಪತ್ರಕರ್ತ ಸಿದ್ದೀಕ್ ನೀರಾಜೆ, ಶಮೀಮ್, ಅಬ್ದುಲ್ ರವೂಫ್ ಉಪಸ್ಥಿತರಿದ್ದರು