ನಿಟ್ಟೆ ಕ್ರೀಡೋತ್ಸವ, ನೂತನ ಒಳಾಂಗಣ ಕ್ರೀಡಾಂಗಣ ಉದ್ಘಾಟನೆ
ಕೊಣಾಜೆ: ನಮ್ಮ ಮಾನಸಿಕ ಸದೃಢತೆಗೆ ದೈಹಿಕ ಕಸರತ್ತು ಅತಿ ಮುಖ್ಯವಾಗಿದ್ದು ದೈಹಿಕವಾಗಿ ನಾವು ಸದೃಢರಾದರೆ ವೈದ್ಯರಿಂದ ದೂರ ಇರಬಹುದು. ದೈಹಿಕವಾಗಿ ನಾವು ಯಾವುದೇ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳದಿದ್ದರೆ ನಮ್ಮ ಸಂಪಾದನೆಯ ಹೆಚ್ಚಿನ ಮೊತ್ತ ವೈದ್ಯರಿಗೆ ಭರಿಸಬೇಕಾದೀತು ಎಂದು ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಆಡಳಿತ ಸಹ ಕುಲಾಧಿಪತಿ ಎನ್. ವಿಶಾಲ್ ಹೆಗ್ಡೆ ಹೇಳಿದರು.
ನಿಟ್ಟೆ ಪರಿಗಣಿಸಲ್ಪಟ್ಟ ವಿವಿಯ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಎಂಟನೇ ನಿಟ್ಟೆ ಕ್ರೀಡೋತ್ಸವ ಹಾಗೂ ನೂತನವಾಗಿ ನಿರ್ಮಿಸಲಾದ ಸುಸಜ್ಜಿತ ಕ್ರೀಡಾಂಗಣವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ನಮಗೆ ಬದುಕಿನಲ್ಲಿ ಕ್ರೀಡೆ ಅತಿ ಮುಖ್ಯ ಕೂಡಾ. ಶಿಕ್ಷಣ ಸಂಸ್ಥೆಗಳು ಸಿಲೆಬಸ್ ನಲ್ಲೂ ಕ್ರೀಡೆಗೆ ಮಹತ್ವ ನೀಡಿದೆ. ನಿಟ್ಟೆ ವಿವಿಯಲ್ಲಿ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳಿದ್ದು ಎಲ್ಲ ಸ್ಪರ್ಧಿಗಳಿಂದ ಉತ್ತಮ ಪ್ರದರ್ಶನ ಮೂಡಿ ಬರಲಿ ಎಂದು ಶುಭ ಕೋರಿದರು.
ಕ್ಷೇಮ ಡೀನ್ ಡಾ. ಪಿ.ಎಸ್. ಪ್ರಕಾಶ್, ಎ.ಬಿ.ಶೆಟ್ಟಿ ಸ್ಮಾರಕ ದಂತ ಮಹಾ ವಿದ್ಯಾಲಯದ ಡೀನ್ ಡಾ. ಯು.ಎಸ್. ಕೃಷ್ಣ ನಾಯಕ್, ಕ್ಷೇಮ ವೈಸ್ ಡೀನ್ ಡಾ. ಪಿ. ಜಯಪ್ರಕಾಶ್ ಶೆಟ್ಟಿ ಹಾಗೂ ನಿಟ್ಟೆ ಗುಲಾಬಿ ಶೆಟ್ಟಿ ಮರಮೋರಿಯಲ್ ಔಷಧೀಯ ವಿಜ್ಞಾನ ಮಹಾವಿದ್ಯಾಲಯದ ಪ್ರಿನ್ಸಿಪಾಲ್ ಡಾ. ಸಿ.ಎಸ್. ಶಾಸ್ತ್ರಿ ಉಪಸ್ಥಿತರಿದ್ದರು.
ನಿಟ್ಟೆ ಇನ್ ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ನ ಪ್ರಿನ್ಸಿಪಾಲ್ ಡಾ. ಫಾತಿಮ ಡಿಸಿಲ್ವ ಸ್ವಾಗತಿಸಿದರು. ನಿಟ್ಟೆ ವಿಶ್ವವಿದ್ಯಾಲಯದ ಕ್ರೀಡಾ ವಿಭಾಗ ಮುಖ್ಯಸ್ಥ ಡಾ. ಮುರಲೀಕೃಷ್ಣ ಅವರು ನಿಟ್ಟೆ ವಿವಿ ಕ್ರೀಡೆಗೆ ನೀಡುವಂತಹ ಪ್ರೋತ್ಸಾಹ, ಕ್ರೀಡಾ ಸೌಲಭ್ಯಗಳು ಹಾಗೂ ನೂತನ ಒಳಾಂಗಣ ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದ ಎಲ್ಲರ ಕಾರ್ಯ ಶ್ಲಾಘಿಸಿ, ವಂದಿಸಿದರು. ಜಿನ್ಸಿ ಜೋಸೆಫ್ ಕಾರ್ಯಕ್ರಮ ನಿರೂಪಿಸಿದರು.