ಹಾಜಿ ಅಬ್ದುಲ್ಲಾ ಮಹಿಳಾ-ಮಕ್ಕಳ ಆಸ್ಪತ್ರೆ ಪಿಪಿಪಿಯಲ್ಲಿ ದೇಶಕ್ಕೆ ಮಾದರಿ ರೋಗಿಗಳಿಗೆ ಉಚಿತ ಚಿಕಿತ್ಸೆ: ಕುಶಾಲ್ ಶೆಟ್ಟಿ
ಉಡುಪಿ, ಫೆ. 24: ಕಳೆದೆರಡು ವರ್ಷಗಳಿಂದ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಕಾರ್ಯಾಚರಿಸುತ್ತಿರುವ ಉಡುಪಿಯ ಕರ್ನಾಟಕ ಸರಕಾರ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಈ ಮಾದರಿಯಲ್ಲಿ ನಡೆಯುತ್ತಿರುವ ದೇಶದ ಅಗ್ರಗಣ್ಯ ಆಸ್ಪತ್ರೆ ಎನಿಸಿದೆ ಎಂದು ಬಿಆರ್ಎಸ್ ಆರೋಗ್ಯ ಮತ್ತು ಸಂಶೋಧನಾ ಸಂಸ್ಥೆಯ ಜನರಲ್ ಮ್ಯಾನೇಜರ್ ಕುಶಾಲ್ ಶೆಟ್ಟಿ ಹೇಳಿದ್ದಾರೆ.
ಅನಿವಾಸಿ ಭಾರತೀಯ ಬಿ.ಆರ್.ಶೆಟ್ಟಿ ಅವರ ಮಾಲಕತ್ವದ ಈ ಆಸ್ಪತ್ರೆಯಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರಕಾರಿ- ಖಾಸಗಿ ಸಹಭಾಗಿತ್ವ ಕ್ಷೇತ್ರದಲ್ಲಿ ಅದ್ಭುತ ಯಶಸ್ಸು ಸಾಧಿಸಿದ ಹಿರಿಮೆಗೆ ಹಾಜಿ ಅಬ್ದುಲ್ಲಾ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆ ಭಾಜನವಾಗಿದೆ ಎಂದರು.
ಈ ಆಸ್ಪತ್ರೆಯ ಯಶಸ್ಸಿನಿಂದ ಪ್ರೇರೇಪಿತವಾದ ಕೇಂದ್ರ ಸರಕಾರ ಇದೀಗ ಆರೋಗ್ಯ ಕ್ಷೇತ್ರದಲ್ಲಿ ಈ ಪಿಪಿಪಿ ಮಾದರಿಯನ್ನು ಇಡೀ ದೇಶಕ್ಕೆ ಅನ್ವಯಿಸಲು ಮುಂದಾಗಿದ್ದು, ಇದಕ್ಕಾಗಿ ಈ ಬಾರಿಯ (2020-2021) ಕೇಂದ್ರ ಬಜೆಟ್ ನಲ್ಲಿ 6,000 ಕೋಟಿ ರೂ.ಗಳನ್ನು ಮೀಸಲಿರಿಸಿದೆ ಎಂದು ಕುಶಾಲ್ ಶೆಟ್ಟಿ ನುಡಿದರು.
ಅತ್ಯಾಧುನಿಕ ವೈದ್ಯೋಪಕರಣ, ಸೌಕರ್ಯ, ಚಿಕಿತ್ಸಾ ಸೌಲಭ್ಯ, ಅಂತಾ ರಾಷ್ಟ್ರೀಯ ಗುಣಮಟ್ಟದ ಚಿಕಿತ್ಸಾ ಸೌಲಭ್ಯಗಳನ್ನು ಹೊಂದಿರುವ 200 ಹಾಸಿಗೆಗಳ ಈ ಆಸ್ಪತ್ರೆಯಲ್ಲಿ ಎಲ್ಲಾ ಚಿಕಿತ್ಸೆಯನ್ನೂ ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ. ಈ ಅತ್ಯಾಧುನಿಕ ಆಸ್ಪತ್ರೆಯಲ್ಲಿ ಬಿಲ್ಲಿಂಗ್ ವಿಭಾಗವೇ ಇರುವುದಿಲ್ಲ. ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಎಲ್ಲಾ ಆರೋಗ್ಯಕ್ಕೆ ಸಂಬಂಧಿ ಸಿದ ಯೋಜನೆಗಳನ್ನು ಇಲ್ಲಿ ಸಂಪೂರ್ಣ ಉಚಿತವಾಗಿಯೇ ನೀಡಲಾಗುತ್ತದೆ. ಬಿಪಿಎಲ್ ಕಾರ್ಡುದಾರರಿಗೆ ಸರಕಾರದ ನೀತಿ ಯಂತೆ ಎಲ್ಲವೂ ಉಚಿತವಾಗಿದ್ದರೆ, ಇಲ್ಲಿ ಎಪಿಎಲ್ ಕಾರ್ಡುದಾರರಿಗೂ ಹೆರಿಗೆ ಸೇರಿದಂತೆ ಎಲ್ಲಾ ಚಿಕಿತ್ಸೆ ಉಚಿತವಾಗಿರುತ್ತದೆ ಎಂದವರು ವಿವರಿಸಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯ ಸರಕಾರದೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಸರಕಾರ, 30 ವರ್ಷಗಳ ಲೀಸ್ಗೆ ಉಚಿತವಾಗಿ ನೀಡಿದ 4.07 ಎಕರೆ ಜಾಗದಲ್ಲಿ ಸುಮಾರು 150 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿದ ಈ ಆಸ್ಪತ್ರೆ 2018ರ ಜ.18ರಿಂದ ಕಾರ್ಯಾರಂಭ ಮಾಡಿದ್ದು, ಇದುವರೆಗೆ ಇಲ್ಲಿ ಒಟ್ಟು 1.34ಲಕ್ಷ ಮಂದಿ ಮಹಿಳೆಯರು ಮತ್ತು ಮಕ್ಕಳು ಚಿಕಿತ್ಸೆ ಪಡೆದಿದ್ದಾರೆ. ಇವರಲ್ಲಿ 5588 ಮಂದಿಯ ಹೆರಿಗೆಯನ್ನು ಯಶಸ್ವಿಯಾಗಿ ಮಾಡಲಾಗಿದೆ ಎಂದರು.
ಪ್ರಸ್ತುತ ಕರ್ನಾಟಕ ಸರಕಾರ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಕರ್ನಾಟಕ ಸರಕಾರ ಹಾಗೂ ಬಿಆರ್ಎಸ್ ಹೆಲ್ತ್ ಮತ್ತು ರಿಸರ್ಚ್ ಸೆಂಟರ್ನ ನೇತೃತ್ವ ವಹಿಸಿರುವ ಬಆರ್ಎಸ್ ವೆಂಚರ್ಸ್ ಅಧ್ಯಕ್ಷ ಡಾ.ಬಿ.ಆರ್.ಶೆಟ್ಟಿ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ. ಮೊದಲು ಉಡುಪಿ ಜಿಲ್ಲೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳಿಗೆ ಸೀಮಿತವಾಗಿದ್ದ ಈ ಆಸ್ಪತ್ರೆ ಈಗ ನಮ್ಮ ಆಡಳಿತಕ್ಕೆ ಸೇರಿದ ಬಳಿಕ ಉಡುಪಿ ಜಿಲ್ಲೆಯೊಂದಿಗೆ ದೂರದ ಶಿವಮೊಗ್ಗ, ಗದಗ, ಉತ್ತರ ಕನ್ನಡ, ಬಾಗಲಕೋಟೆ, ದಕ್ಷಿಣ ಕನ್ನಡ ಹಾಗೂ ನೇಪಾಳದ ರೋಗಿಗಳಿಗೂ ವಿಶ್ವದರ್ಜೆಯ ಆರೋಗ್ಯ ಸೇವೆ, ಸೌಲಭ್ಯ ಗಳನ್ನು ಒದಗಿಸಲಾಗಿದೆ ಎಂದು ಕುಶಾಲ್ ಶೆಟ್ಟಿ ನುಡಿದರು.
200 ಹಾಸಿಗೆಗಳ ಈ ಆಸ್ಪತ್ರೆಯಲ್ಲಿ 33 ಐಸಿಯು ಹಾಸಿಗೆಗಳಿವೆ. ಪ್ರಧಾನವಾಗಿ ಮಕ್ಕಳ ಹಾಗೂ ಹೆರಿಗೆ ಆಸ್ಪತ್ರೆಯಾಗಿರುವ ಇಲ್ಲಿ ಮಹಿಳೆಯರು ಹಾಗೂ ಮಕ್ಕಳಿಗೆ ಸಂಬಂಧಿಸಿದ ಎಲ್ಲಾ ಚಿಕಿತ್ಸೆಯನ್ನು ನೀಡಲಾಗುತ್ತದೆ. ಮಾಡ್ಯುಲರ್ ಆಪರೇಷನ್ ಥಿಯೇಟರ್, ಎಮರ್ಜೆನ್ಸಿ ಕೋಣೆ, ರಕ್ತಸಂಗ್ರಹ, ಹೈಪ್ರಿಕ್ವೇನ್ಸಿ ವೆಂಟಿಲೇಟರ್, ಡಿಜಿಟಲ್ ಎಕ್ಸರೇ, ಆಧುನಿಕ ಪ್ರಯೋಗಾಲಯ ಗಳನ್ನು ಒಳಗೊಂಡಿದೆ ಎಂದರು.
ಹಿಂದೆ ಹಾಜಿ ಅಬ್ದುಲ್ಲಾ ಸರಕಾರಿ ಆಸ್ಪತ್ರೆಯಲ್ಲಿ 70 ಬೆಡ್ಗಳಿದ್ದು ಪ್ರತಿದಿನ 100ರಿಂದ 120 ರೋಗಿಗಳು ಭೇಟಿ ನೀಡುತಿದ್ದರೆ, ಈಗ ಪ್ರತಿದಿನ ಸರಾಸರಿ 350 ಮಂದಿ ಭೇಟಿ ನೀಡುತ್ತಾರೆ. ಹಿಂದೆ ತಿಂಗಳಿಗೆ 150ರವರೆಗೆ ಹೆರಿಗೆಗಳಾದರೆ, ಈಗ ಈ ಸಂಖ್ಯೆ ಸರಾಸರಿ 380 ಆಗಿದೆ. ನವಜಾತ ಶಿಶು ಮರಣ ಪ್ರಮಾಣ ಶೇ.2.55 ಹಾಗೂ 0-5 ಮಕ್ಕಳ ಮರಣ ಶೇ.2.8 ಆಗಿದೆ. ಇದರ ರಾಷ್ಟ್ರೀಯ ಪ್ರಮಾಣ ಶೇ.34-35 ಇದೆ ಎಂದು ಆಸ್ಪತ್ರೆಯ ಗೈನಕಾಲಜಿಸ್ಟ್ ಹಾಗೂ ಮೆಡಿಕಲ್ ಸುಪರಿಂಟೆಂಡೆಟ್ ಡಾ.ಶಿಖಾ ನುಡಿದರು.
ಇಲ್ಲಿ ಪೌಷ್ಠಿಕಾಂಶದ ಕೊರತೆ ಇರುವ ಮಕ್ಕಳಿಗೂ 14 ದಿನಗಳ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಇಲ್ಲಿ ಈಗ ರಿಸ್ಕ್ ಪ್ರಮಾಣ 3ರವರೆಗಿನ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಅದಕ್ಕಿಂತ ಹೆಚ್ಚಿದ್ದರೆ ಬೇರೆ ಆಸ್ಪತ್ರೆಗೆ ಸೂಚಿಸಲಾಗುತ್ತದೆ. ಇದರ ಪ್ರಮಾಣ ಶೇ.2 ಮಾತ್ರ. ಮುಂದೆ ಈಗ ನಿರ್ಮಾಣಗೊಳ್ಳುತ್ತಿರುವ ಶಂಭು ಶೆಟ್ಟಿ ಸ್ಮಾರಕ ಸೆಂಟರ್ ಆಫ್ ಎಕ್ಸಲೆನ್ಸ್ ಆಸ್ಪತ್ರೆ ಕಾರ್ಯಾರಂಭ ಮಾಡಿದಾಗ ಇಂಥ ರೋಗಿಗಳಿಗೆ ಅಲ್ಲೇ ಉಚಿತ ಚಿಕಿತ್ಸೆ ನೀಡಲಾಗುವುದು ಎಂದರು.
ಆಸ್ಪತ್ರೆಯಲ್ಲಿ ಏಳು ಮಂದಿ ಮಕ್ಕಳ ತಜ್ಞರು, ಆರು ಮಂದಿ ಸ್ತ್ರೀರೋಗ ತಜ್ಞ ಹಾಗೂ ಹೆರಿಗೆ ತಜ್ಞರು ಸೇರಿದಂತೆ ಒಟ್ಟು 35 ವೈದ್ಯರು ಕಾರ್ಯ ನಿರ್ವಹಿಸುತಿದ್ದಾರೆ. ಒಳರೋಗಿಗಳಾಗಿ ಸೇರಿದ ಎಲ್ಲರಿಗೂ ಉಚಿತ ಆಹಾರ, ಔಷಧ ಸೇರಿದಂತೆ ಎಲ್ಲವನ್ನೂ ಉಚಿತವಾಗಿಯೇ ನೀಡಲಾಗುತ್ತದೆ. ಇದಕ್ಕಾಗಿ ತಿಂಗಳಿಗೆ 3.5 ಕೋಟಿ ರೂ.ವೆಚ್ಚ ಬರುತಿದ್ದು, ಬಿ.ಆರ್.ಶೆಟ್ಟಿ ಅವರು ತಮ್ಮ ಹುಟ್ಟೂರಿಗೆ ಜನರ ಸೇವೆಯ ದೃಷ್ಚಿಯಿಂದ ಇದನ್ನು ನಡೆಸುತಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಆರ್ ಲೈಫ್ನ ಸಮೂಹ ವೈದ್ಯಕೀಯ ನಿರ್ದೇಶಕ ಡಾ.ಅಜೋಯ್ರಾಜ್ ಮಲ್ಪೆ, ವೈದ್ಯಕೀಯ ಅಧೀಕ್ಷಕಿ ಡಾ.ಶಿಖಾ ಉಪಸ್ಥಿತ ರಿದ್ದರು.