ಭಿನ್ನಮತ ಇಲ್ಲದೆ, ಹಾಲಿನ ಜೊತೆ ಸಕ್ಕರೆ ತರಹ ಇದ್ದೇವೆ: ನಳೀನ್
ಉಡುಪಿ, ಫೆ. 24: ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ. ಭಿನ್ನಮತ ಮಾಧ್ಯಮದಲ್ಲಿ ಇದೆಯೇ ಎಂಬುದು ನನಗೆ ಸಂಶಯ. ನಾವು ಹಾಲಿನ ಜೊತೆ ಸಕ್ಕರೆ ತರಹ ಇದ್ದೇವೆ. ಬಿಜೆಪಿಯಲ್ಲಿ ಮೂಲ, ಬಂದವರು, ಹೋದವರು ಎಂಬುದಿಲ್ಲ. ಪಕ್ಷಕ್ಕೆ ಬಂದವರೆಲ್ಲರೂ ನಮ್ಮ ಜೊತೆ ಒಂದಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಉಡುಪಿಯಲ್ಲಿಂದು ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಸಿ.ಎಂ. ಇಬ್ರಾಹಿಂ ಟೀಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತ್ರಿಯಿಸಿದ ಅವರು, ಯಾರ್ರೀ ಅವರು. ಮೊದಲು ಅವರ ಪಕ್ಷದ ಬಗ್ಗೆ ಮಾತಾಡಲಿ. ಕಾಂಗ್ರೆಸ್ಗೆ ಅಧ್ಯಕ್ಷರ ಆಯ್ಕೆ ಮಾಡಲಿ. ಪಕ್ಷ ಉಳಿಸುವ ಚಿಂತನೆ ಮಾಡಲಿ. ಇಂದು ಕಾಂಗ್ರೆಸ್ನಲ್ಲಿ ಸೋನಿಯಾ ಗಾಂಧಿಯೇ ಹಂಗಾಮಿಯಾಗಿದ್ದಾರೆ. ವಿಪಕ್ಷ ನಾಯಕರ ಆಯ್ಕೆಯೇ ಅವ ರಿಂದ ಆಗುತ್ತಿಲ್ಲ. ರಾಷ್ಟ್ರೀಯ ಪಕ್ಷಕ್ಕೆ ಏನು ತಿಗೇಡು ಬಂದಿದೆ ಎಂದು ಟೀಕಿಸಿದರು.
ಇಡೀ ಜಗತ್ತು ಇಂದು ಭಾರತದ ಕಡೆ ನೋಡುತ್ತಿದೆ. ಭಾರತೀಯ ಸಂಸ್ಕೃತಿ ಮೋದಿಯಿಂದ ಜಗತ್ತಿಗೆ ಪರಿಚಯ ಆಗುತ್ತಿದೆ. ಟ್ರಂಪ್ ಪ್ರವಾಸದಿಂದ ಭಾರತ ಮತ್ತು ಅಮೆರಿಕಾ ಸಂಬಂಧ ಮತ್ತಷ್ಟು ಗಟ್ಟಿ ಆಗಲಿದೆ. ಈ ಮೂಲಕ ಭಾರತಕ್ಕೆ ಎಲ್ಲಾ ನೆರವು ಅಮೆರಿಕಾ ದಿಂದ ಸಿಗಲಿದೆ ಎಂದರು.
ಇದರ ಬಗ್ಗೆ ವಿಪಕ್ಷಗಳು ವಿರೋಧಕ್ಕೆ ವಿರೋಧ ಮಾಡುತ್ತಿವೆ. ಬಿಜೆಪಿಯ ಎಲ್ಲವನ್ನು ಟೀಕೆ ಮಾಡುವುದು ಕಾಂಗ್ರೆಸ್ ಜಾಯಮಾನ. ಕಾಂಗ್ರೆಸ್ ಬೌದ್ಧಿಕ ವಾಗಿ ದಿವಾಳಿಯಾಗಿದೆ. ರಾಷ್ಟ್ರದ ಪರಿಕಲ್ಪನೆ ಕಾಂಗ್ರೆಸ್ಗೆ ಇಲ್ಲ. ಕಾಂಗ್ರೆಸ್ ಆಡಳಿತ ಇರುವಾಗ ಒಬಾಮಾ ಬಂದಿಲ್ವಾ? ಒಬಾಮಾ ಲೋಕಸಭೆಯಲ್ಲಿ ಭಾಷಣ ಮಾಡಿದ್ದರು. ಕಾಂಗ್ರೆಸ್ ಆಗ ಕಣ್ಮುಚ್ಚಿ ಕುಳಿತದ್ದು ಯಾಕೆ ಎಂದು ಅವರು ಪ್ರಶ್ನಿಸಿದರು.