ಫೆ.29ರಿಂದ ಅಂಬಲಪಾಡಿ ಸನಿವಾಸ ಶಿಬಿರ
ಉಡುಪಿ, ಫೆ.25: ಉಡುಪಿಯ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಘಟಕ ಕಳೆದ 9 ವರ್ಷಗಳಿಂದ ಪ್ರಥಮ ಪಿಯುಸಿ ಮುಗಿಸಿದ ವಿದ್ಯಾಪೋಷಕ್ ಫಲಾನುಭವಿಗಳಿಗೆ ಅಂಬಲಪಾಡಿಯ ದೇವಳದ ಆಶ್ರಯದಲ್ಲಿ ನಡೆಸಿಕೊಂಡು ಬರುತ್ತಿರುವ ಐದು ದಿನಗಳ ಸನಿವಾಸ ಶಿಬಿರವನ್ನು ಈ ಬಾರಿ ಫೆ.29ರಿಂದ ಮಾ.4ರವರೆಗೆ ಆಯೋಜಿಸಿದೆ.
ಫೆ.29ರ ಶನಿವಾರ ಸಂಜೆ 4 ಕ್ಕೆ ದೇವಳದ ಭವಾನಿ ಮಂಟಪದಲ್ಲಿ ದೇವಳದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳರು ಶಿಬಿರವನ್ನು ಉದ್ಘಾಟಿಸಲಿದ್ದು, ಉಡುಪಿ ಜಿಲ್ಲಾಧಿಕಾರಿಗಳಾದ ಜಿ. ಜಗದೀಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಿಕ್ಷಣ ತಜ್ಞ ರಾಜ ಗೋಪಾಲ ಆಚಾರ್ಯ, ಉದ್ಯಮಿ ಯೋಗೀಶ್ಚಂದ್ರಾಧರ, ಅಮೆರಿಕದ ಬಾಲಕೃಷ್ಣ ರಾವ್ ಭಾಗವಹಿಸಲಿದ್ದಾರೆ.
ಹುಬ್ಬಳ್ಳಿಯ ಮೈಲೈಪ್ ಸಂಸ್ಥೆಯ ಸಂಸ್ಥಾಪಕ ಪ್ರವೀಣ್ ಗುಡಿ ನಿರ್ದೇಶನ ದಲ್ಲಿ ಐವರು ಸಂಪನ್ಮೂಲ ವ್ಯಕ್ತಿಗಳ ತಂಡ ಶಿಬಿರವನ್ನು ನಡೆಸಿಕೊಡಲಿದ್ದಾರೆ. ಶಿಬಿರದಲ್ಲಿ ಆಂಗ್ಲ ಭಾಷಾ ಕೌಶಲ, ಸಂವಹನ ಕೌಶಲ, ನಾಯಕತ್ವ ತರಬೇತಿ, ವೃತ್ತಿ ಮಾರ್ಗದರ್ಶನ, ಸಮೂಹ ಸಹಭಾಗಿತ್ವ, ಸಮಾಜಮುಖಿ ಚಿಂತನೆ, ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣದ ಕುರಿತು ತರಬೇತಿ ನೀಡಲಾಗುವುದು. ಇದೇ ಸಂದರ್ಭದಲ್ಲಿ ಸಾಧಕ ವ್ಯಕ್ತಿಗಳೊಂದಿಗೆ ಸಂವಾದ ಏರ್ಪಡಿಸಲಾಗುವುದು. ಸುಮಾರು ಇನ್ನೂರು ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಕೆ. ಗಣೇಶ್ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.