ಶಿರ್ವ ಕಾಲೇಜಿನಲ್ಲಿ ರಕ್ತದಾನ ಶಿಬಿರ
ಶಿರ್ವ, ಫೆ.25: ಸ್ಥಳೀಯ ಮುಲ್ಕಿ ಸುಂದರ್ರಾಮ್ ಶೆಟ್ಟಿ ಕಾಲೇಜಿನ ಎನ್ನೆಸ್ಸೆಸ್ ಘಟಕ, ಕಾಲೇಜಿನ ಹಳೆ ವಿದ್ಯಾರ್ಥಿ ಸಂಘ ಮತ್ತು ರೆಡ್ಕ್ರಾಸ್ ಸೊಸೈಟಿ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ‘ರಕ್ತದಾನ ಶಿಬಿರ’ವನ್ನು ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಕುಂದಾಪುರ ಭಾರತೀಯ ರೆಡ್ಕ್ರಾಸ್ ಸೊಸೈಟಿಯ ಅಧ್ಯಕ್ಷ ಜಯಕರ ಶೆಟ್ಟಿ ಎಸ್. ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಒಂದು ಯೂನಿಟ್ ರಕ್ತದಿಂದ ಮೂರು ಜೀವಗಳನ್ನು ಉಳಿಸಲು ಸಾದ್ಯವಿದೆ. ಆದ್ದರಿಂದ ಯುವಕರು ರಕ್ತದಾನ ದಂತಹ ಶ್ರೇಷ್ಠ ದಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ರಕ್ತದಾನ ಮಾಡುವಂತೆ ಕರೆ ನೀಡಿದರು.
ದಾಖಲೆಯ ರಕ್ತದಾನದ ಮೂಲಕ ಜನಪ್ರಿಯರಾದ ಕಾಲೇಜಿನ ಹಳೆ ವಿದ್ಯಾರ್ಥಿ ಸುಧಾಕರ್ ರೈ ಮಾತನಾಡಿ ‘ನಾನು 108 ಬಾರಿ ರಕ್ತದಾನ ಮಾಡಿದ್ದೇನೆ. ಇನ್ನೂ 65ನೇ ಪ್ರಾಯದವರೆಗೂ ರಕ್ತದಾನ ಮಾಡಬೇಕೆಂದಿದ್ದೇನೆ. ರಕ್ತದಾನದಿಂದ ದೇಹದಲ್ಲಿ ಹೊಸ ಹುರುಪು, ಉತ್ಸಾಹ ಮೂಡುತ್ತದೆ’ ಎಂದರು.
ಉಡುಪಿ ಬ್ರಹ್ಮಗಿರಿ ಲಯನ್ಸ್ ಕ್ಲಬ್ನ ಅಧ್ಯಕ್ಷ ಹರಿಪ್ರಸಾದ್ ರೈ, ಅಕ್ರಂ ಅವರು ಉಪಸ್ಥಿತರಿದ್ದರು. ಕಾಲೇಜಿನ ಸಂಚಾಲಕ ವಿ. ಸುಬ್ಬಯ್ಯ ಹೆಗ್ಡೆ ಅವರು ಸಾಂದರ್ಭಿಕವಾಗಿ ಮಾತನಾಡಿ ಶುಭಕೋರಿದರು. ಕಾಲೇಜಿನ ಪ್ರಾಂಶುಪಾಲೆ ಡಾ.ನಯನ ಎಂ ಸ್ವಾಗತಿಸಿದರು. ಕಾಲೇಜಿನ ರಾ.ಸೇ. ಯೋಜನಾಧಿಕಾರಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ನಾಯಕ ಶ್ರೇಯಸ್ ವಂದಿಸಿದರು.