ಫೆ.29ರಂದು ದ.ಕ.ಜಿಲ್ಲಾ ಸಖಾಫಿ ಸಂಗಮ, ವಾರ್ಷಿಕ ಮಹಾಸಭೆ
ಪುತ್ತೂರು, ಫೆ.26: ದ.ಕ. ಜಿಲ್ಲಾ ಸಖಾಫಿ ಕೌನ್ಸಿಲ್ ವತಿಯಿಂದ ಸಖಾಫಿ ಸಂಗಮ ಮತ್ತು ವಾರ್ಷಿಕ ಮಹಾಸಭೆಯು ಫೆ.29ರಂದು ಬೆಳಗ್ಗೆ ಬಿ.ಸಿ.ರೋಡ್ ಸಮೀಪದ ಆಲಡ್ಕ ಎಸ್.ಎಸ್. ಹಾಲ್ನಲ್ಲಿ ಆಯೋಜಿಸಲಾಗಿದೆ ಎಂದು ಸಖಾಫಿ ಸಂಗಮದ ನಿರ್ವಹಣಾ ಸಮಿತಿಯ ಕನ್ವೀನರ್ ಮಹ್ಬೂಬುರ್ರಹ್ಮಾನ್ ಸಖಾಫಿ ಕಿನ್ಯ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಶೈಖುನಾ ಕಾಂತಪುರ ಎ.ಪಿ.ಅಬೂಬಕರ್ ಮುಸ್ಲಿಯಾರ್ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ಸಮನ್ವಯ ವಿದ್ಯಾಕೇಂದ್ರ ಜಾಮಿಯ ಮರ್ಕಝುಸ್ಸಖಾಫತಿಸ್ಸುನ್ನಿಯಾದ 43ನೇ ವಾರ್ಷಿಕ ಮಹಾ ಸಮ್ಮೇಳನವು ಎಪ್ರಿಲ್ 9ರಿಂದ 12ರ ತನಕ ಕೇರಳದ ಮರ್ಕಝ್ನಲ್ಲಿ ನಡೆಯಲಿದೆ. ಅದರ ಪ್ರಚಾರಾರ್ಥವಾಗಿ ಜಿಲ್ಲಾ ಸಖಾಫಿ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
‘ಸುಸ್ಥಿರ ಸಮಾಜ, ಸುಭದ್ರ ರಾಷ್ಟ್ರ’ ಎಂಬ ಘೋಷ ವಾಕ್ಯದೊಂದಿಗೆ ನಡೆಯಲಿರುವ ಈ ಸಖಾಫಿ ಸಂಗಮ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಸಖಾಫಿ ಕೌನ್ಸಿಲ್ ಕೋಶಾಧಿಕಾರಿ ಸೈಯದ್ ಶಿಹಾಬುದ್ದೀನ್ ಸಖಾಫಿ ಅಲ್ ಹೈದ್ರೋಸಿ ದುಆ ಮೂಲಕ ಚಾಲನೆ ನೀಡಲಿದ್ದಾರೆ. ದ.ಕ. ಜಿಲ್ಲಾಧ್ಯಕ್ಷ ಮುಹಮ್ಮದ್ ಅಲಿ ಸಖಾಪಿ ಅಶ್ ಅರಿಯ್ಯಾ ಅಧ್ಯಕ್ಷತೆ ವಹಿಸಲಿದ್ದಾರೆ.
ರಾಜ್ಯ ಅಧ್ಯಕ್ಷ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಟ ಉದ್ಘಾಟಿಸಲಿದ್ದಾರೆ. ಕೇರಳ ರಾಜ್ಯ ಹಜ್ ಸಮಿತಿಯ ಅಧ್ಯಕ್ಷ, ಮರ್ಕಝ್ ಜನ್ರಲ್ ಮೆನೇಜರ್ ಸಿ.ಮುಹಮ್ಮದ್ ಫೈಝಿ ಮುಖ್ಯ ಭಾಷಣ ಮಾಡುವರು. ರಾಜ್ಯ ನೇತಾರ ಜಿ.ಎಂ.ಮುಹಮ್ಮದ್ ಕಾಮಿಲ್ ಸಖಾಫಿ ಸೇರಿದಂತೆ ಹಲವಾರು ಉಲಮಾ ಉಮರಾಗಳು ಭಾಗವಹಿಸಲಿದ್ದಾರೆ.
ಮರ್ಕಝ್ ಸಮ್ಮೇಳನ ಪ್ರಚಾರಾರ್ಥ ಮಾ.1ರಿಂದ ಎ.5ರ ತನಕ ಜಿಲ್ಲೆಯ ಆಯ್ದ 100 ಮೊಹಲ್ಲಾಗಳಲ್ಲಿ ಮೊಹಲ್ಲಾ ಸಮ್ಮೇಳನ ನಡೆಯಲಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಖಾಫಿ ಕೌನ್ಸಿಲ್ ದ.ಕ. ಜಿಲ್ಲಾ ಸಮಿತಿಯ ಅಧ್ಯಕ್ಷ ಅಶ್ಅರಿಯ್ಯಿ ಮುಹಮ್ಮದ್ ಅಲಿ ಸಖಾಪಿ, ಸಖಾಫಿ ಸಂಗಮ ನಿರ್ವಹಣಾ ಸಮಿತಿಯ ಅಧ್ಯಕ್ಷ ಅಬ್ದುಸ್ಸತ್ತಾರ್ ಸಖಾಫಿ ಬೆಳ್ಳಾರೆ, ನಿರ್ವಹಣಾ ಸಮಿತಿಯ ಕೋಶಾಧಿಕಾರಿ ಅಬ್ದುಲ್ ಅಝೀಝ್ ಸಖಾಫಿ ಕೊಳ್ತಿಗೆ, ಸಮ್ಮೇಳನ ಮೊಹಲ್ಲಾ ಪ್ರಚಾರ ನಿರ್ವಹಣಾ ಸಮಿತಿಯ ಅಧ್ಯಕ್ಷ ಶಾಫಿ ಸಖಾಫಿ ಕೊಕ್ಕಡ ಉಪಸ್ಥಿತರಿದ್ದರು.