ಮೂಡುಬಿದಿರೆ: ಮನೆಯವರಿಂದಲೇ ಯುವಕನ ಕೊಲೆ; ಆರೋಪ
ಮೂಡುಬಿದಿರೆ, ಫೆ.26: ಮನೆಯವರಿಂದಲೇ ಹಲ್ಲೆಗೊಳಗಾಗಿ ವ್ಯಕ್ತಿಯೋರ್ವ ಕೊಲೆಯಾದ ಘಟನೆ ಕೆಲ್ಲಪುತ್ತಿಗೆಯಲ್ಲಿ ನಡೆದಿರುವ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ವರದಿಯಾಗಿದೆ.
ಕೆಲ್ಲಪುತ್ತಿಗೆ ನಿವಾಸಿ ಸಿದ್ದು ಎಂಬವರ ಪುತ್ರ ರವೀಂದ್ರ(38)ಕೊಲೆಯಾದವರು. ಪ್ರಕರಣಕ್ಕೆ ಸಂಬಂಧಿಸಿ ರವೀಂದ್ರರ ಸಹೋದರ ಶ್ರೀನಿವಾಸ(42) ಮತ್ತು ಬಾವ ಆನಂದ(40) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
ಘಟನೆ ವಿವರ: ಅವಿವಾಹಿತರಾಗಿದ್ದ ರವೀಂದ್ರ ಮನೆಯ ಖರ್ಚನ್ನು ನೋಡುತ್ತಿದ್ದರೆನ್ನಲಾಗಿದೆ. ಆದರೆ ಆರೋಪಿಗಳಾದ ಶ್ರೀನಿವಾಸ ಮತ್ತು ಆನಂದ ಮದ್ಯಪಾನ ಚಟ ಹೊಂದಿದ್ದು, ಸರಿಯಾಗಿ ಕೆಲಸಕ್ಕೆ ಹೋಗದೆ ಮನೆಯಲ್ಲೆ ಇರುತ್ತಿದ್ದರೆನ್ನಲಾಗಿದೆ. ರವಿವಾರ ರಾತ್ರಿ ಕ್ಷುಲ್ಲಕ ವಿಚಾರದಲ್ಲಿ ತಗಾದೆ ತೆಗೆದ ಶ್ರೀನಿವಾಸ ಮತ್ತು ಆನಂದ ಅವರು ರವೀಂದ್ರರ ಹೊಟ್ಟೆಗೆ ಕಾಲಿನಿಂದ ಬಲವಾಗಿ ತುಳಿದು ಹಲ್ಲೆ ನಡೆಸಿದ್ದರೆನ್ನಲಾಗಿದೆ. ಇದರಿಂದ ಹೊಟ್ಟೆಯ ಒಳಭಾಗಕ್ಕೆ ತೀವ್ರ ಸ್ವರೂಪದ ಏಟು ಬಿದ್ದ ಪರಿಣಾಮ ರವೀಂದ್ರ ರಕ್ತ ವಾಂತಿ ಮಾಡಿದರೆನ್ನಲಾಗಿದೆ.
ರವೀಂದ್ರರ ಬೊಬ್ಬೆ ಕೇಳಿ ಸ್ವಲ್ಪಹೊತ್ತಿನ ಬಳಿಕ ನೆರೆಮನೆಯವವರು ಧಾವಿಸಿ ಬಂದು ಅವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದರೆನ್ನಲಾಗಿದೆ. ಮಾರಣಾಂತಿಕ ಏಟು ಬಿದ್ದಿರುವುದರಿಂದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿದರಿಂದ ವಾಪಸ್ ಮನೆಗೆ ಕರೆತಂದು ಸೋಮವಾರ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕೊಂಡೊಯ್ದಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆನ್ನಲಾಗಿದೆ.
ಮರದಿಂದ ಬಿದ್ದು ಸಾವೆಂದು ಪ್ರಚಾರ: ರವಿ ಕರಿಮೆಣಸು ಕೊಯ್ಯಲು ಹೋಗಿ ಮರದಿಂದ ಬಿದ್ದಿದ್ದರೆಂದು ಆರೋಪಿಗಳು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು. ಆದರೆ ವಿಚಾರಣೆ ವೇಳೆ ಆರೋಪಿಗಳ ದೈಹಿಕ ಹಿಂಸೆಯಿಂದ ರವೀಂದ್ರ ಸಾವನಪ್ಪಿರುವುದಾಗಿ ತಿಳಿದುಬಂದಿದೆ.
ಆರೋಪಿಗಳನ್ನು ದಸ್ತಗಿರಿ ಮಾಡಿದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.