ಉಡುಪಿ: ದೆಹಲಿ ಹಿಂಸಾಚಾರ ವಿರೋಧಿಸಿ ಎಸ್ಡಿಪಿಐ ಪ್ರತಿಭಟನೆ
ಉಡುಪಿ, ಫೆ.27: ದೆಹಲಿಯಲ್ಲಿ ಮುಸ್ಲಿಮರ ವಿರುದ್ಧ ವ್ಯವಸ್ಥಿತವಾಗಿ ಮಾಡುತ್ತಿರುವ ದಾಳಿಯನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲೆ ಇದರ ನೇತೃತ್ವದಲ್ಲಿ ಪ್ರತಿಭಟನೆಯನ್ನು ಇಂದು ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಧರ್ಮಗುರು ಫಾ.ವಿಲಿಯಂ ಮಾರ್ಟಿಸ್, ದೆಹಲಿಯಲ್ಲಿ ಮುಸ್ಲಿಮರ ಮೇಲೆ ನಡೆದ ದಾಳಿಯು ಪೂರ್ವ ನಿಯೋಜಿತ ದಾಳಿಯಾಗಿದೆ. ಸಂಘಪರಿವಾರದ ಇಂತಹ ಯೋಜನೆಗೆ ಪ್ರತಿ ರೋಧ ಒಡ್ಡಬೇಕಾದರೆ ನಾವೆಲ್ಲ ಒಂದಾಗಬೇಕಾಗಿದೆ. ಈ ಮೂಲಕ ಹೋರಾಟ ನಡೆಸಿದರೆ ಅಂತಿಮವಾಗಿ ಜಯ ನಮ್ಮದೆ ಆಗುತ್ತದೆ ಎಂದರು.
ಎಸ್ಡಿಪಿಐ ಮುಖಂಡ ಅಬ್ದುರ್ರಹ್ಮಾನ್ ಮಲ್ಪೆ ಮಾತನಾಡಿ, ಬಿಜೆಪಿ ಸರಕಾರ ತಮ್ಮ ಜನವಿರೋಧಿ ಯೋಜನೆಗಳನ್ನು ಮರೆ ಮಾಚಲು ಧರ್ಮ ಧರ್ಮಗಳ ಮಧ್ಯೆ ಗಲಭೆ ಸೃಷ್ಟಿಸುತ್ತಿದ್ದಾರೆ. ಇವರ ಆಡಳಿತವನ್ನು ವಿರೋಧಿ ಸುವರಿಗೆ ದೇಶದ್ರೋಹದ ಪಟ್ಟ ಕಟ್ಟಿ ಧ್ವನಿ ಅಡಗಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಹೋರಾಟ ಮಾಡುವುದು ನಮ್ಮ ಜನ್ಮ ಸಿದ್ಧ ಹಕ್ಕು. ನಾವು ಮಾಡುವ ಪ್ರತಿಭಟನೆಗೆ ಯಾರು ಕೂಡ ಕುಮ್ಮುಕ್ಕು ನೀಡುತ್ತಿಲ್ಲ. ಸಂವಿಧಾನ ನೀಡಿದ ಹಕ್ಕಿನೊಂದಿಗೆ ನಾವು ಹೋರಾಟ ಮಾಡುತ್ತಿದ್ದೇವೆ. ಮೋದಿ ಸಂವಿಧಾನ ಬದ್ಧ ವಾಗಿ ಆಡಳಿತ ನಡೆಸುತ್ತಿಲ್ಲ. ಹಾಗಾಗಿ ನಾವೆಲ್ಲ ಬೀದಿಗೆ ಇಳಿದು ಹೋರಾ ಡುವ ಪರಿಸ್ಥಿತಿ ಈ ದೇಶದಲ್ಲಿ ನಿರ್ಮಾಣವಾಗಿದೆ ಎಂದರು.
ಈ ಸಂದರ್ಭದಲ್ಲಿ ಎಸ್ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಲ್ಯಾಸ್ ಸಾಸ್ತಾನ, ಪಿಎಫ್ಐ ಉಡುಪಿ ವಲಯ ಅಧ್ಯಕ್ಷ ಬಶೀರ್ ಅಂಬಾಗಿಲು, ಎಸ್ಡಿಪಿಐ ಜಿಲ್ಲಾ ಸದಸ್ಯ ಸಲೀಂ ನಿಟ್ಟೂರು ಮೊದಲಾದವರು ಉಪಸ್ಥಿತರಿದ್ದರು.