ಶಕ್ತಿ ಸಂಸ್ಥೆಗಳಿಂದ ಕೆ.ಸಿ. ನಾಯಕ್ ರಿಗೆ ಅಭಿನಂದನೆ
ಶಕ್ತಿನಗರ: ಶಕ್ತಿನಗರದ ಶಕ್ತಿ ಪಿ.ಯು ಕಾಲೇಜು, ಶಕ್ತಿ ವಸತಿ ಶಾಲೆ, ಶ್ರೀ ಗೋಪಾಲಕೃಷ್ಣ ಪೂ. ಪ್ರಾ ಶಾಲೆ ಹಾಗೂ ಶ್ರೀ ಮಹಾಬಲೇಶ್ವರ ಪ್ರಮೋಟರ್ಸ್ ಮತ್ತು ಬಿಲ್ಡರ್ಸ್ ಮೊದಲಾದ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ತಮ್ಮ ಸಂಸ್ಥೆಯ ಸ್ಥಾಪಕ ಕೆ.ಸಿ ನಾಯಕ್ ಅವರನ್ನು ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಸಂದರ್ಭ ಅಭಿನಂದಿಸಿ, ಗೌರವಿಸಿದರು.
ಶಿಕ್ಷಣ, ಸಂಸ್ಕೃತಿ ಹಾಗೂ ಸಮಾಜ ಸೇವೆಗೆ ಕೆ.ಸಿ ನಾಯಕ್ ಸಲ್ಲಿಸಿದ ಸೇವೆಯನ್ನು ಗುರುತಿಸಿ ವಿಶ್ವವಿದ್ಯಾನಿಲಯವು ತನ್ನ 38ನೆಯ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ನ್ನು ಪ್ರದಾನ ಮಾಡಿದೆ.
ಸಂಸ್ಥೆಯ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್ ಅಭಿನಂದನ ಭಾಷಣ ಮಾಡಿ ನಾಯಕ್ ರವರ ಉದ್ಯಮಶೀಲತೆ, ಕ್ರಿಯಾಶೀಲತೆ ಹಾಗೂ ಶ್ರದ್ಧಾ ಭಕ್ತಿಗಳ ಸಮಾಜ ಸೇವೆಯ ಪರಿಚಯ ಮಾಡಿಕೊಟ್ಟರು. ಶಾಲು ಹೊದಿಸಿ, ಹಣ್ಣು ಹಂಪಲುಗಳನ್ನು ಹಾಗೂ ಬೆಳ್ಳಿಯ ಜೋಡಿ ದೀಪಗಳನ್ನು ನೀಡಿ ಸನ್ಮಾನಿಸಲಾಯಿತು.
ತನ್ನನ್ನು ಕೈ ಹಿಡಿದು ಮುನ್ನೆಡೆಸಿದ ಸಮಾಜಕ್ಕೆ ತಾನು ಸದಾ ಆಭಾರಿ ಎಂದು ಕೆ.ಸಿ ನಾಯಕ್ ನುಡಿದರು. ದೇವಾಲಯ ಮತ್ತು ವಿದ್ಯಾಲಯಗಳನ್ನು ಕಟ್ಟುವ ನನ್ನ ಕನಸು ನನಸಾಗಿ ಜೀವನ ಸಾರ್ಥಕವಾಗಿದೆ. ಇದೀಗ ಮಂಗಳೂರು ವಿಶ್ವವಿದ್ಯಾನಿಲಯದವರು ನೀಡಿದ ಗೌರವ ಡಾಕ್ಟರೇಟ್ ನನ್ನ ಜವಾಬ್ದಾರಿಯನ್ನು ಇನ್ನೂ ಹೆಚ್ಚಿಸಿದೆ ಎಂದು ಸನ್ಮಾನಕ್ಕೆ ಉತ್ತರವಾಗಿ ನುಡಿದರು.
ವೇದಿಕೆಯಲ್ಲಿ ಶಕ್ತಿ ಎಜ್ಯುಕೇಶನ್ ಟ್ರಸ್ಟಿನ ಪ್ರಧಾನ ಸಲಹೆಗಾರ ರಮೇಶ ಕೆ, ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ನೀಮಾ ಸಕ್ಸೇನಾ, ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಪ್ರಕ್ಯಾತ್ ರೈ ಉಪಸ್ಥಿತರಿದ್ದರು.
ಶಿಕ್ಷಕಿ ಸ್ವಾತಿ ಭರತ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳು ತಾವೇ ತಯಾರಿಸಿದ ಹೂಗುಚ್ಛಗಳನ್ನು ಶಾಲಾ ಸಂಸ್ಥಾಪಕರಿಗೆ ನೀಡಿ ಸಂಭ್ರಮ ಪಟ್ಟರು. ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ. ಸ್ವಾಗತಿಸಿದರು. ಕಾಲೇಜಿನ ಪ್ರಾಚಾರ್ಯ ಶ್ರೀ ಪ್ರಭಾಕರ ಜಿ.ಎಸ್ ವಂದಿಸಿದರು.