ಸಿಡಿಮದ್ದು ಸ್ಪೋಟ ಪ್ರಕರಣ: ನಾಲ್ವರ ವಿರುದ್ಧ ದೂರು
ಈಶ್ವರಮಂಗಲ : ಮಧ್ಯರಾತ್ರಿಯ ವೇಳೆ ಪುತ್ತೂರಿನ ಮಹಾಲಿಂಗೇಶ್ವರ ದೇವಳದ ಎದುರಿನ ದೇವರುಮಾರು ಗದ್ದೆಯಲ್ಲಿ ಸಿಡಿಮದ್ದು ಸ್ಪೋಟಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರ ವಿರುದ್ಧ ಪುತ್ತೂರು ನಗರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದ ನಿವಾಸಿಗಳಾದ ಮನು ಗೌಡ (23), ನವೀನ್(27), ವಿನೋದ್ (23) ಮತ್ತು ಮಂಜುನಾಥ್ ಬಿ (25) ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ದೇವಳದ ಎದುರಿನ ಗದ್ದೆಯಲ್ಲಿರುವ ದೇವಳದ ಅನ್ನಛತ್ರದ ಬಳಿ ಬುಧವಾರ ರಾತ್ರಿ 12 ಗಂಟೆಯ ವೇಳೆಗೆ ಸಡುಮದ್ದು ಸ್ಫೋಟಕದ ಮಾದರಿಯಲ್ಲಿ ಭಾರೀ ಶಬ್ಧ ಕೇಳಿಸಿತ್ತು. ಗಾಬರಿಗೊಂಡ ಸ್ಥಳೀಯರು ಎಚ್ಚೆತ್ತುಕೊಂಡು ನೋಡಿದಾಗ ಈ ಕೃತ್ಯ ನಡೆಸಿದ ಮಂದಿ ಕಾರೊಂದರಲ್ಲಿ ಅಲ್ಲಿಂದ ತೆರಳುತ್ತಿರುವುದು ಕಂಡು ಬಂದಿತ್ತು. ಘಟನೆಗೆ ಸಂಬಂಧಿಸಿ ಮಹಾಲಿಂಗೇಶ್ವರ ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಅವರು ನೀಡಿದ್ದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.
ಈ ಯುವಕರ ತಂಡ ಸ್ನೇಹಿತನೊಬ್ಬನ ಬರ್ತ್ಡೇ ಪಾರ್ಟಿ ಮಾಡಲು ದೇವಳದ ಗದ್ದೆಗೆ ಬಂದು ಕೇಕ್ ಕತ್ತರಿಸಿ ಬಳಿಕ ಆಕಾಶದಲ್ಲಿ ಬಣ್ಣದ ಚಿತ್ತಾರ ಮೂಡಿಸುವ ಸುಡುಮದ್ದು ಪ್ರದರ್ಶನ ಮಾಡಿದ್ದರು ಎನ್ನಲಾಗಿದ್ದು, ತಡರಾತ್ರಿಯ ವೇಳೆ ನಡೆದ ಈ ಸ್ಫೋಟದ ಶಬ್ಧ ಕೇಳಿ ಸ್ಥಳೀಯರು ಎಚ್ಚೆತ್ತುಕೊಂಡಿದ್ದ ವೇಳೆ ಅಲ್ಲಿಂದ ಕಾರಿನಲ್ಲಿ ಪರಾರಿಯಾಗಿದ್ದರು.