ಮೇಲ್ತೆನೆ : ‘ಪೊಲೆಕರೆಲೊರು ಬ್ಯಾರಿ ಸಾಹಿತ್ಯ ಕೂಟ’ ಕಾರ್ಯಕ್ರವು
ದೇರಳಕಟ್ಟೆ, ಮಾ.8: ಬ್ಯಾರಿ ಎಲ್ತ್ಕಾರ್ ಮತ್ತು ಕಲಾವಿದರ ಕೂಟ ‘ಮೇಲ್ತೆನೆ’ ಇದರ ವತಿಯಿಂದ ಉಳ್ಳಾಲ ಉಳಿಯ ನದಿ ತೀರದ ಕಿಂಗ್ಸ್ಟಾರ್ ರಿವರ್ ವ್ಯೂವ್ನಲ್ಲಿ ‘ಪೊಲೆಕರೆಲೊರು ಬ್ಯಾರಿ ಸಾಹಿತ್ಯ ಕೂಟ’ ಕಾರ್ಯಕ್ರಮವು ರವಿವಾರ ಮುಂಜಾನೆ ನಡೆಯಿತು.
ಉಳ್ಳಾಲ ನಗರಸಭೆಯ ಉಪಾಧ್ಯಕ್ಷೆ ರಝಿಯಾ ಇಬ್ರಾಹೀಂ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಮೇಲ್ತೆನೆಯ ಅಧ್ಯಕ್ಷ ಹಾಗೂ ಮದನಿ ಪ.ಪೂ.ಕಾಲೇಜಿನ ಪ್ರಾಂಶುಪಾಲ ಇಸ್ಮಾಯೀಲ್ ಮಾಸ್ಟರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ, ಕಥೆಗಾರ ಹಂಝ ಮಲಾರ್, ಕವಿಗಳಾದ ಬಶೀರ್ ಅಹ್ಮದ್ ಕಿನ್ಯ, ಖಲೀಲ್ ಕಲ್ಲಾಪು, ಶಿಕ್ಷಕ ಅಶೀರುದ್ದೀನ್ ಆಲಿಯಾ, ಚಿಂತಕ ಫಾರೂಕ್ ಉಳ್ಳಾಲ್, ಲೇಖಕ ಮುಹಮ್ಮದ್ ಉಳ್ಳಾಲ್, ಪತ್ರಕರ್ತರಾದ ಬಶೀರ್ ಕಲ್ಕಟ್ಟ, ಶಾರೂಕ್ ತೀರ್ಥಹಳ್ಳಿ ಕವನ ವಾಚಿಸಿದರು.
ದ.ಕ.ಜಿಲ್ಲೆಯ ಜೀವನದಿಯಾದ ನೇತ್ರಾವತಿಯು ಅರಬ್ಬೀ ಸಮುದ್ರ ಸೇರುವ ಉಳ್ಳಾಲದ ನದಿ ತಟದ ಪಕ್ಕದ ಉಳಿಯದಲ್ಲಿ ಅಳಿವಿನಂಚಿನಲ್ಲಿ ರುವ ಬ್ಯಾರಿ ಭಾಷೆಯ ಉಳಿವಿಗಾಗಿ ‘ಮೇಲ್ತನೆ’ಯು ಹಮ್ಮಿಕೊಂಡ ಈ ವಿಶಿಷ್ಟ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿದ ಸ್ಪಂದನೆಯು ಸ್ಥಳೀಯ ವಾಗಿ ಸಿಕ್ಕಿತು. ಸಾಹಿತ್ಯ ಕೂಟದಲ್ಲಿ ಪರಿಸರ, ಮಹಿಳಾ ದಿನಾಚರಣೆಯ ಕುರಿತಂತೆ ಮನದಾಳದ ನೋವು-ನಲಿವು ಮತ್ತು ಹರೇಕಳ ಹಾಜಬ್ಬರ ಯಶೋಗಾಥೆಯ ಬಗ್ಗೆ ಕವನ, ಚುಟುಕು, ಪ್ರಬಂಧಗಳು ಅನಾವರಣಗೊಂಡಿತು.
ಪತ್ರಕರ್ತ ಆಸೀಫ್ ಬಬ್ಬುಕಟ್ಟೆ, ಸಾಮಾಜಿಕ ಕಾರ್ಯಕರ್ತ ಇಬ್ರಾಹೀಂ ಉಳಿಯ-ಮಾರ್ಗತಲೆ, ಸ್ಥಳೀಯ ಪ್ರಮುಖರಾದ ಉಮರ್ ಬಾವಾ ಉಪಸ್ಥಿತರಿದ್ದರು. ಪರಿಸರವಾದಿ ಮಂಗಳೂರು ರಿಯಾಝ್ ಸ್ವಾಗತಿಸಿದರು. ಲೇಖಕ ಇಸ್ಮತ್ ಪಜೀರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉದ್ಯಮಿ ಮನ್ಸೂರ್ ಅಹ್ಮದ್ ಸಾಮಣಿಗೆ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಬಾಷಾ ನಾಟೆಕಲ್ ವಂದಿಸಿದರು.