ಶಾಂತಿಯುತ ಬದುಕಿಗೆ ಸಮಾಜದ ಸ್ವಾಸ್ಥ್ಯ ಮುಖ್ಯ: ನ್ಯಾ.ನಝೀರ್
ಉಡುಪಿ ಜಿಲ್ಲಾ ಹೊಸ ಪೋಕ್ಸೋ ನ್ಯಾಯಾಲಯ ಉದ್ಘಾಟನೆ
ಉಡುಪಿ, ಮಾ.14: ನ್ಯಾಯಾಲಯಗಳು ಜನರಿಗಾಗಿಯೇ ಹೊರತು ಜನರು ನ್ಯಾಯಾಲಯಕ್ಕೆ ಅಲ್ಲ. ಹೀಗಾಗಿ ನ್ಯಾಯಾಲಯದಲ್ಲಿ ಹೆಚ್ಚು ಹೆಚ್ಚು ದಾವೆಗಳು ದಾಖಲಾಗುವಂತೆ ಅವಕಾಶ ಮಾಡಿಕೊಡಬಾರದು. ದಾವೆಗಳು ಹೆಚ್ಚಾದರೆ ಆ ಸಮಾಜದ ಸ್ವಾಸ್ಥ್ಯ ಹಾಳಾಗಿದೆ ಎಂದು ಅರ್ಥ. ಶಾಂತಿಯುತ ವಾಗಿ ಬದುಕಲು ಸಮಾಜದ ಸ್ವಾಸ್ಥ್ಯ ಬಹಳ ಮುಖ್ಯ. ಈ ನಿಟ್ಟಿನಲ್ಲಿ ವಕೀಲರು ಜನರಿಗೆ ಸರಿಯಾದ ಕಾನೂನು ಸಲಹೆಗಳನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜಸ್ಟಿಸ್ ಎಸ್.ಅಬ್ದುಲ್ ನಝೀರ್ ಹೇಳಿದ್ದಾರೆ.
ಉಡುಪಿ ನ್ಯಾಯಾಲಯ ಸಂಕೀರ್ಣದಲ್ಲಿ ನೂತನವಾಗಿ ಆರಂಭಿಸಲಾದ ಉಡುಪಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ- ಎಫ್ಟಿಎಸ್ಸಿ (ಪೋಕ್ಸೋ ನ್ಯಾಯಾಲಯ)ಯನ್ನು ಶನಿವಾರ ಉದ್ಘಾಟಿಸಿ ಅವರು ಮಾತಾಡುತಿದ್ದರು.
ಪೋಕ್ಸೊ ನ್ಯಾಯಾಲಯಕ್ಕೆ ಬರುವ ಪ್ರಕರಣಗಳು ಉತ್ತಮ ಸಮಾಜದಲ್ಲಿ ಒಳ್ಳೆಯ ಬೆಳವಣಿಗೆಯಲ್ಲ. ಆದರೆ ಆ ಪಿಡುಗನ್ನು ನಿವಾರಿಸಲು ಹಾಗೂ ಕಾನೂನು ಪ್ರಕಾರ ಸಂತ್ರಸ್ತರಿಗೆ ನ್ಯಾಯ ದೊರಕಿಸಿ ಕೊಡಲು ಪೋಕ್ಸೋ ನ್ಯಾಯಾಲಯ ಅಗತ್ಯವಾಗಿೆ ಎಂದು ಅವರು ಅಭಿಪ್ರಾಯ ಪಟ್ಟರು.
ಕರ್ನಾಟಕದಲ್ಲಿ ಕ್ರಿಮಿನಲ್ಗಿಂತ ಸಿವಿಲ್ ಪ್ರಕರಣಗಳೇ ಅಧಿಕವಾಗಿರುವುದ ರಿಂದ ನಮ್ಮ ಸಮಾಜದ ಸ್ವಾಸ್ಥ ಅಷ್ಟು ಕೆಟ್ಟದಾಗಿಲ್ಲ ಎಂಬುದಾಗಿದೆ. ಆದರೆ ಉತ್ತರ ಭಾರತದ ರಾಜ್ಯಗಳಲ್ಲಿ ಕ್ರಿಮಿನಲ್ ಪ್ರಕರಣಗಳು ಶೇ.70ರಷ್ಟಿದ್ದರೆ ಸಿವಿಲ್ ಪ್ರಕರಣಗಳು ಕೇವಲ ಶೇ.30ರಷ್ಟಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅವರು ತಿಳಿಸಿದರು.
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ನ್ಯಾ.ಅಶೋಕ್ ಜಿ.ನಿಜಗಣ್ಣವರ್ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಕ್ರಿಮಿನಲ್ ಪ್ರಕರಣಗಳು ಕಡಿಮೆಯಾಗಿದ್ದು, ದಾವೆಗಳು ಶೀಘ್ರವಾಗಿ ಇತ್ಯರ್ಥಗೊಳ್ಳುತ್ತಿವೆ. ಸಣ್ಣ ಸಣ್ಣ ವಿಚಾರ ಕ್ಕಾಗಿ ಮನಸ್ತಾಪ ಮಾಡಿ ಕೊಂಡು ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ನಾವೇ ನಮ್ಮ ಸಮಾಜದ ಹಾನಿಗೆ ಕಾರಣವಾಗುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ನ್ಯಾಯಮೂರ್ತಿ ಅಬ್ದುಲ್ ನಝೀರ್, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ(ಪೋಕ್ಸೋ ನ್ಯಾಯಾಲಯ) ಕಚೇರಿ ಮತ್ತು ಪೋಕ್ಸೋ ನ್ಯಾಯಾಲಯದ ಕಚೇರಿ, ಸಂತ್ರಸ್ತರ ವಿಶ್ರಾಂತಿ ಕೊಠಡಿಯನ್ನು ಉದ್ಘಾಟಿಸಿದರು.
ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಎಂ.ಜೋಶಿ, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ(ಪೋಕ್ಸೋ ನ್ಯಾಯಾಲಯ) ವನಮಾಲ ಆನಂದ ರಾವ್, ವಿಧಾನ ಪರಿಷತ್ ಸದಸ್ಯ ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ಎಸ್.ಎಲ್.ಬೋಜೆಗೌಡ, ವಕೀಲರ ಸಂಘದ ಅಧ್ಯಕ್ಷ ದಿವಾಕರ ಎಂ.ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರೆನೋಲ್ಡ್ ಪ್ರವೀಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಶೀಘ್ರವೇ ಕೌಟುಂಬಿಕ ನ್ಯಾಯಾಲಯ
ಉಡುಪಿ ವಕೀಲರ ಸಂಘದ ಬೇಡಿಕೆಯಂತೆ ಉಡುಪಿ ಜಿಲ್ಲೆಯಲ್ಲಿ ಶೀಘ್ರವೇ ಕೌಟುಂಬಿಕ ನ್ಯಾಯಾಲಯವನ್ನು ಆರಂಭಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಅದೇ ರೀತಿ ಉಡುಪಿ ನ್ಯಾಯಾಲಯದಲ್ಲಿ ಈಗಾಗಲೇ 2.80ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ನಡೆಸಲು ಎರಡು ಮೂರು ದಿನಗಳಲ್ಲಿ ಟೆಂಡರ್ ಅಂತಿಮಗೊಳಿಸಲಾಗುವುದು. ಅಲ್ಲದೆ ನಾಲ್ಕೂವರೆ ಕೋಟಿ ರೂ. ವೆಚ್ಚದ ಯೋಜನೆಯನ್ನು ಕೂಡ ಸಿದ್ಧಪಡಿಸಲಾ ಗಿದೆ. ಅದಕ್ಕೆ ಜನಪ್ರತಿನಿಧಿಗಳು ಸಹಕಾರ ನೀಡಬೇಕು ಎಂದು ನ್ಯಾ.ಅಶೋಕ್ ಜಿ.ನಿಜಗಣ್ಣವರ್ ತಿಳಿಸಿದರು.