ಮಾ. 22ರಂದು ಜನತಾ ಕರ್ಫ್ಯೂ: ಪ್ರಧಾನಿ ಮೋದಿ ಬೆಂಬಲಿಸಲು ಚಂದ್ರಶೇಖರ ಸ್ವಾಮೀಜಿ ಕರೆ
ಮುಲ್ಕಿ : ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೋನ ವೈರಸ್ ವಿರುದ್ಧ ನಿರ್ಣಾಯಕ ಸಮರದ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿರುವ ಜನತಾ ಕರ್ಫ್ಯೂವನ್ನು ಜನರು ಬೆಂಬಲಿಸಬೇಕೆಂದು ಬೆಂಗಳೂರಿನ ಅಂತರಾಷ್ಟ್ರೀಯ ವಾಸ್ತು ತಜ್ಞ ಹಾಗೂ ವೈಜ್ಞಾನಿಕ ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ ಕರೆ ನೀಡಿದ್ದಾರೆ.
ಮುಲ್ಕಿಯ ತಮ್ಮ ಆಶ್ರಮದಲ್ಲಿ ಮಾಧ್ಯಮದವರ ಜೊತೆ ಸ್ವಾಮೀಜಿ ಮಾತನಾಡಿ, ಜಗತ್ತನ್ನು ತಲ್ಲಣಗೊಳಿಸಿರುವ ಕೊರೋನದಂತಹ ಮಾರಕ ರೋಗಗಳನ್ನು ತಡೆಗಟ್ಟಲು ಇಡೀ ದೇಶವೇ ಒಗ್ಗಟ್ಟಾಗಿ ಧೈರ್ಯದಿಂದ ಎದುರಿಸಬೇಕು ಎಂಬ ಪ್ರಧಾನಿ ಹೇಳಿಕೆಗೆ ಬೆಂಬಲ ಸೂಚಿಸಿ, ಸವಾಲುಗಳನ್ನು ಎದುರಿಸಲು ಸಂಘಟನಾತ್ಮಕ ವಾಗಿ ಕೆಲಸ ಮಾಡುವಂತೆ ಜನತೆಗೆ ವಿನಂತಿಸಿದ್ದಾರೆ.
ಕೊರೋನ ವೈರಸ್ ತಡೆಗಟ್ಟಲು ಇಡೀ ದೇಶದ ಜನತೆಯ ಬೆಂಬಲ ಪ್ರಧಾನಿಯವರಿಗೆ ಬೇಕಾಗಿದ್ದು, ರವಿವಾರದ ಜನತಾ ಕರ್ಫ್ಯೂ ಮೂಲಕ ಯಶಸ್ವಿ ಗೊಳಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು. ಈ ಸಂದರ್ಭ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕಿ ರಜನಿ ಚಂದ್ರಶೇಖರ ಭಟ್, ಸಂಚಾಲಕ ಪುನೀತ್ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.