ಲಾಕ್ ಡೌನ್: ಸಹಾಯಕ ಆಯುಕ್ತರು-ತಹಶೀಲ್ದಾರರಿಗೆ ಪ್ರಕರಣ ದಾಖಲಿಸುವ ಹೊಣೆ
ಮಂಗಳೂರು, ಮಾ. 26: ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ಜಿಲ್ಲಾಡಳಿತ ಹೊರಡಿಸಲಾದ ಆದೇಶಗಳನ್ನು ಉಲ್ಲಂಘಿಸುವವರ ಮತ್ತು ಸೆ.144 ಹಾಗೂ ಸೆ.144(3)ನ್ನು ಮುರಿಯುವವರ ವಿರುದ್ಧ ಆಯಾ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸುವ ಹೊಣೆಯನ್ನು ಕಂದಾಯ ಉಪವಿಭಾಗದ ಸಹಾಯಕ ಆಯುಕ್ತರು ಮತ್ತು ತಹಶೀಲ್ದಾರರಿಗೆ ನೀಡಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ದ.ಕ.ಜಿಲ್ಲೆಯಲ್ಲಿ ಮಂಗಳೂರು ಮತ್ತು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರು ಹಾಗೂ ಮಂಗಳೂರು, ಮೂಡುಬಿದಿರೆ, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಕಡಬ, ಸುಳ್ಯ ತಹಶೀಲ್ದಾರರು ಕಾರ್ಯಾಚರಿಸುತ್ತಿದ್ದಾರೆ.
ಕೊರೋನ ವೈರಸ್ ತಡೆಗಟ್ಟಲು ಜಿಲ್ಲಾಡಳಿತ ಅನೇಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿವೆ. ಸಾರ್ವಜನಿಕರ ಹಿತದೃಷ್ಟಿಯಿಂದ ಅನೇಕ ಆದೇಶಗಳನ್ನು ಹೊರಡಿಸುತ್ತಿವೆ. ಅವುಗಳನ್ನು ಪಾಲಿಸದೆ ಲಘುವಾಗಿ ಪರಿಗಣಿಸುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲು ಸಹಾಯಕ ಆಯುಕ್ತರು, ತಹಶೀಲ್ದಾರರಿಗೆ ಜವಾಬ್ದಾರಿ ನೀಡಿದ್ದಾರೆ.