ಬೈಕ್ ಅಪಘಾತ : ಸವಾರ ಮೃತ್ಯು
ಮಂಗಳೂರು, ಮಾ.26: ನಗರದ ಹೊರ ವಲಯದ ಅಡ್ಯಾರ್ ಸೋಮನಾಥ ಕಟ್ಟೆ ಬಳಿ ಬೈಕ್ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರ ಗಾಯಗೊಂಡು ಮೃತಪಟ್ಟ ಮತ್ತು ಸಹ ಸವಾರೆ ಗಂಭೀರ ಗಾಯಗೊಂಡ ಘಟನೆ ಬುಧವಾರ ನಡೆದಿದೆ.
ಮುಲ್ಕಿ ನಿವಾಸಿ ಶಿವರಾಮ (25) ಮೃತಪಟ್ಟವರು. ಇವರ ಸಹೋದರಿ ರಮ್ಯಾ(23) ತಲೆಗೆ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪ್ರಕರಣ ದಾಖಲಿಸಿರುವ ಕಂಕನಾಡಿ ಸಂಚಾರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಅವರು ಬೆಂಗಳೂರಿನಲ್ಲಿ ಉದ್ಯೋಗಿಗಳಾಗಿದ್ದರು. ಲಾಕ್ಡೌನ್ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಇವರು ಬೆಂಗಳೂರಿನಿಂದ ಮುಲ್ಕಿಯಲ್ಲಿರುವ ಮನೆಗೆ ಬೈಕ್ನಲ್ಲಿ ಪ್ರಯಾಣ ಬೆಳೆಸಿದ್ದರು. ಅಡ್ಯಾರ್ಗೆ ತಲುಪುತ್ತಿದ್ದಂತೆ ಬೈಕ್ ಚಲಾಯಿಸುತ್ತಿದ್ದ ಶಿವರಾಮ್ ನಿದ್ದೆಕಣ್ಣಿಗೆ ಜಾರಿರಬೇಕು ಎಂದು ಶಂಕಿಸಲಾಗಿದೆ. ಹಾಗೇ ಬೈಕ್ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದಿರಬೇಕು ಎಂದು ಶಂಕಿಸಲಾಗಿದೆ.
ಅಪಘಾತದಿಂದ ಇಬ್ಬರೂ ಗಂಭೀರ ಗಾಯಗೊಂಡಿದ್ದು, ಸ್ಥಳೀಯರು ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಶಿವರಾಮ್ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ರಮ್ಯಾ ಚಿಕಿತ್ಸೆ ಪಡೆಯುತ್ತಿದ್ದಾರೆ.