ಲಾಕ್ಡೌನ್ : ಕೊಡ್ಯಮಲೆ ಅರಣ್ಯದಲ್ಲಿ ಕುಡುಕರ ಹಾವಳಿ
ಬಂಟ್ವಾಳ, ಮಾ.26: ಕೊರೋನ ವೈರಸ್ ಪ್ರಕರಣ ತಡೆಗಟ್ಟುವ ಹಿನ್ನೆಲೆಯಲ್ಲಿ ಸರಕಾರ ದೇಶಾದ್ಯಂತ ಲಾಕ್ ಡೌನ್ ಆದೇಶಿದೆ. ಲಾಕ್ಡೌನ್ ನಿಂದ ಜನಸಾಮಾನ್ಯರು ದಿನಸಿಗಾಗಿ ಪರದಾಡುತ್ತಿದ್ದರೆ, ಕೆಲವೆಡೆ ದಿನಸಿ ಕೊಂಡುಕೊಳ್ಳಲು ಹಣವೂ ಇಲ್ಲದೆ ಜನತೆ ಭೀಕರ ಸ್ಥಿತಿಯನ್ನು ಎದುರಿಸುತ್ತಿದೆ.
ಇಂತಹ ವಿಷಮ ಪರಿಸ್ಥಿತಿಯಲ್ಲಿ ಕುಡುಕರಿಗೇನು ಸಮಸ್ಯೆ ಇಲ್ಲ ಎನ್ನುವುದಕ್ಕೆ ನಿದರ್ಶನ ಎಂಬಂತೆ ಇಲ್ಲೊಂದು ಉದಾಹರಣೆ ಇದೆ. ಬಂಟ್ವಾಳ ತಾಲೂಕಿನ ಕೊಡ್ಯಮಲೆ ಅರಣ್ಯ ವ್ಯಾಪ್ತಿಯ ವಗ್ಗ ಸಮೀಪ ಕುಡುಕರು ಮಧ್ಯದ ಬಾಟಲಿಗಳನ್ನು ಕಾಡಿನಲ್ಲಿ ಎಸೆದು ಹೋಗಿದ್ದಾರೆ.
ಲಾಕ್ ಡೌನ್ ವಿಧಿಸಿದ್ದರಿಂದ ಬಾರ್ ಗಳಲ್ಲಿ ಮಧ್ಯಸೇವನೆ ಅಸಾಧ್ಯ ವಾದ್ದರಿಂದ ಕಾಡಿನಲ್ಲಿ ಕುಡಿದು, ಮೋಜು ಮಸ್ತಿ ಮಾಡಿ ಹೋಗುತ್ತಾರೆ ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ.
ಕೆಲವೆಡೆ ಅಕ್ರಮವಾಗಿ ಮಧ್ಯ ಪೂರೈಕೆ ಆಗುತ್ತಿದೆ ಎಂಬ ಆರೋಪವೂ ಕೇಳಿ ಬರುತ್ತಿವೆ. ಕೊಡ್ಯಮಲೆ ಅರಣ್ಯ ಪ್ರದೇಶದ ವ್ಯಾಪ್ತಿ ವಿಶಾಲವಾಗಿರುವುದರಿಂದ ಹಲವು ರೀತಿಯ ಕಾಡುಪ್ರಾಣಿಗಳು ಕಾಡಿನಲ್ಲಿ ಸಂಚರಿಸುತ್ತಿರುತ್ತವೆ. ಮಧ್ಯಮ ಬಾಟಲಿಯಿಂದ ಪ್ರಾಣಿಗಳಿಗೂ ಹಾನಿಯಾಗುವ ಸಂಭವವಿದೆ.
ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.