ಡಾ. ಟಿಎಂಎ ಪೈ ಆಸ್ಪತ್ರೆ ಸಂಪೂರ್ಣ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆ: ಡಿಸಿ ಜಗದೀಶ್
ಉಡುಪಿ, ಮಾ.30: ಕೊರೋನ ವೈರಸ್ ಸೋಂಕಿತ (ಪಾಸಿಟಿವ್ ಪ್ರಕರಣ) ರೋಗಿಗಳಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಉಡುಪಿಯ ಡಾ.ಟಿ.ಎಂ.ಎ.ಪೈ ಆಸ್ಪತ್ರೆ ಯನ್ನು ಸಂಪೂರ್ಣ ಕೋವಿಡ್ -19 ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಮಣಿಪಾಲ ರಜತಾದ್ರಿಯಲ್ಲಿರುವ ಜಿಪಂ ಸಭಾಂಗಣದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು. ಉಡುಪಿ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರದ ಸಹಕಾರದೊಂದಿಗೆ ಮಣಿಪಾಲ ಮಾಹೆ ಸಂಸ್ಥೆಯು ಡಾ.ಟಿಎಂಎ ಪೈ ಆಸ್ಪತ್ರೆಯನ್ನು ಕರೋನಾ ವೈರಸ್ ಸೋಂಕಿತರಿಗೆ ಮೀಸಲಿಡಲು ನಿರ್ಧರಿಸಿದೆ ಎಂದರು.
ಉದ್ಯಾವರ ಎಸ್ಡಿಎಂ ಆಯುರ್ವೇದ ಆಸ್ಪತ್ರೆಯಲ್ಲಿ 150, ಜಿಲ್ಲಾಸ್ಪತ್ರೆ ಮತ್ತು ಕುಂದಾಪುರ, ಕಾರ್ಕಳ ತಾಲೂಕು ಕೇಂದ್ರಗಳಲ್ಲಿ ತಲಾ 20 ಐಸೋ ಲೇಷನ್ ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ. ಕೊರೋನ ಶಂಕಿತರಲ್ಲಿ ಹೈ ರಿಸ್ಕ್ ಪ್ರಕರಣಗಳನ್ನು ಎಸ್ಡಿಎಂ ಆಸ್ಪತ್ರೆಯಲ್ಲಿ ಇರಿಸಲಾಗು ತ್ತದೆ. ಇವರಲ್ಲಿ ಪಾಸಿಟಿವ್ ಪ್ರಕರಣವನ್ನು ಟಿಎಂಎ ಪೈಗೆ ವರ್ಗಾಯಿಸಿ ಚಿಕಿತ್ಸೆ ನೀಡಲಾಗು ತ್ತದೆ. ಲೋ ರಿಸ್ಕ್ ಪ್ರಕರಣಗಳನ್ನು ಹಾಸ್ಟೆಲ್ ಗಳಲ್ಲಿಯೂ ಇರಿಸಲು ಉದ್ದೇಶಿಲಾಗಿದೆ ಎಂದು ಅವರು ಹೇಳಿದರು.
ಮಾಹೆಯ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, ಇದೀಗ ಟಿಎಂಎ ಪೈ ಆಸ್ಪತ್ರೆಯಲ್ಲಿರುವ ಒಳರೋಗಿಗಳನ್ನು ಮಣಿಪಾಲ ಕೆಎಂಸಿಗೆ ವರ್ಗಾಯಿಸುವ ಕಾರ್ಯ ನಡೆಸಲಾಗುತ್ತಿದೆ. ಈಗಾಗಲೇ ಮಣಿ ಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರು ಕೊರೋನ ಸೋಂಕಿತರನ್ನು ಎ.1ರಿಂದ ಡಾ.ಟಿಎಂಎ ಪೈ ಆಸ್ಪತ್ರೆಗೆ ವಗಾಯಿರ್ಸಲಾಗುತ್ತದೆ ಎಂದು ತಿಳಿಸಿದರು.
100 ಹಾಸಿಗೆಗಳ ಡಾ.ಟಿಎಂಎ ಪೈ ಆಸ್ಪತ್ರೆಯಲ್ಲಿ 11 ತೀವ್ರ ನಿಗಾ ಘಟಕ (ಐಸಿಯು) ಹಾಸಿಗೆಗಳು, 15 ಎಚ್ಡಿಯು (ಹೈ ಡೆಪೆಂಡೆನ್ಸಿ ಯುನಿಟ್) ಹಾಸಿಗೆಗಳು, 36 ಖಾಸಗಿ ಕೊಠಡಿಗಳಿವೆ. ಇವುಗಳನ್ನು ಪ್ರತ್ಯೇಕ ಉದ್ದೇಶಕ್ಕಾಗಿ (ಐಸೋಲೇಷನ್) ಬಳಸಲಾಗುತ್ತದೆ. ಜೊತೆಗೆ 43 ಸಾಮಾನ್ಯ ಹಾಸಿಗೆಗಳ ಸೌಲಭ್ಯ ಕೂಡ ಇಲ್ಲಿ ಇದೆ ಎಂದು ಅವರು ತಿಳಿಸಿದರು.
ಮಣಿಪಾಲ ಕೆಎಂಸಿ ಆಸ್ಪತ್ರೆ ಮತ್ತು ಡಾ.ಟಿಎಂಎ ಪೈ ಆಸ್ಪತ್ರೆಯ ವೈದ್ಯರ ತಂಡ, ನರ್ಸಿಂಗ್, ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ಸಹಾಯಕ ಸಿಬ್ಬಂದಿಗಳ ಸಮರ್ಪಿತ ತಂಡವು ದಿನದ 24 ಗಂಟೆಗಳ ಕಾಲವೂ ಇಲ್ಲಿ ಕಾರ್ಯ ನಿರ್ವಹಿಸ ಲಿದೆ. ಅದೇ ರೀತಿ ಇಲ್ಲಿ ಫಿವರ್ ಕ್ಲಿನಿಕ್ನ್ನು ಕೂಡ ಸ್ಥಾಪಿಸಲಾಗುತ್ತದೆ. ಸಾಮಾನ್ಯ ಜ್ವರದ ರೋಗಿಗಳನ್ನು ಇಲ್ಲಿ ಸ್ಕ್ರೀನಿಂಗ್ ಮಾಡಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಸಿಇಓ ಪ್ರೀತಿ ಗೆಹ್ಲೋಟ್, ಎಸ್ಪಿ ವಿಷ್ಣುವರ್ಧನ್, ಶಾಸಕ ಕೆ.ರಘುಪತಿ ಭಟ್, ಮಾಹೆ ಕುಲಪತಿ ಡಾ.ವಿನೋದ್ ಭಟ್ ಉಪಸ್ಥಿತರಿದ್ದರು.
ಕೊರೋನ ಸೋಂಕಿತರು ಚೇತರಿಕೆ
ಈಗಾಗಲೇ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಮೂವರು ಕೊರೋನ ವೈರಸ್ ಸೋಂಕಿತರು ಯುವಕರು ಆಗಿರುವುದರಿಂದ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಪ್ರಥಮ ಪ್ರಕರಣದ ವ್ಯಕ್ತಿ ಸಂಪೂರ್ಣ ಗುಣಮುಖವಾಗಿದ್ದು, ಸದ್ಯ ಅವರಲ್ಲಿ ಯಾವುದೇ ರೋಗದ ಲಕ್ಷಣಗಳಿಲ್ಲ. ಅವರ ಎರಡು ಸ್ಯಾಂಪಲ್ಗಳಲ್ಲಿ ನೆಗೆಟಿವ್ ಬಂದ ಬಳಿಕ ಡಿಸ್ಚಾರ್ಜ್ ಮಾಡಲಾಗುವುದು ಎಂದು ಡಾ.ಎಚ್. ಎಸ್.ಬಲ್ಲಾಳ್ ತಿಳಿಸಿದರು.
ಕೊರೋನ ವೈರಸ್ನಿಂದ ಹೆಚ್ಚಿನವರಿಗೆ ಸಮಸ್ಯೆ ಆಗುವುದಿಲ್ಲ. ಸಣ್ಣ ಪ್ರಾಯ ದವರಿಗೆ ಇಮ್ಯುನಿಟಿ (ರೋಗ ನಿರೋಧಕ ಶಕ್ತಿ)ಇರುವುದರಿಂದ ನ್ಯೂಮೋನಿಯ ಮಾದರಿಯ ಕಾಯಿಲೆ ಬಂದು ಗುಣವಾಗುತ್ತದೆ. ಆದರೆ 65ವರ್ಷಕ್ಕಿಂತ ಮೇಲ್ಪಟ್ಟವರಿಗೆ ಹಾಗೂ ಬೇರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಈ ಸೋಂಕು ಬರುವ ಸಾಧ್ಯತೆ ಜಾಸ್ತಿ ಇರುವುದರಿಂದ ಅವರಿಗೆ ಐಸೋಲೇಶನ್ ವ್ಯವಸ್ಥೆ ಅಗತ್ಯವಾಗಿ ಬೇಕಾಗುತ್ತದೆ ಎಂದು ಅವರು ಹೇಳಿದರು.
10 ವೆಂಟಿಲೇಶನ್ಗಳಿಗೆ ಪ್ರಸ್ತಾವ
ಕೊರೋನ ಚಿಕಿತ್ಸೆಗೆ ಸಂಬಂಧಿಸಿ ಶೇ.2ರಷ್ಟು ವೆಂಟಿಲೇಶನ್ಗಳ ಅವಶ್ಯಕತೆ ಇದ್ದು, ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ 26 ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ 9 ವೆಂಟಿಲೇಶನ್ಗಳಿವೆ. ಅದೇ ರೀತಿ 10 ವೆಂಟಿಲೇಶನ್ಗಳನ್ನು ಜಿಲ್ಲೆಗೆ ನೀಡು ವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದರು.
ಪ್ರಯೋಗಾಲಯ ಸ್ಥಾಪನೆಗೆ ಬೇಕಾದ ಎಲ್ಲ ಸೌಲಭ್ಯಗಳು ಮಣಿಪಾಲ ಕೆಎಂಸಿಯಲ್ಲಿ ಇದ್ದು, ಉಡುಪಿ ಜಿಲ್ಲೆಗೆ ಪ್ರಯೋಗಾಲಯದ ಬಹಳಷ್ಟು ಅಗತ್ಯ ಇದೆ. ಈ ನಿಟ್ಟಿನಲ್ಲಿ ಜಿಲ್ಲೆಗೆ ಪ್ರಯೋಗಾಲಯ ಮಂಜೂರು ಮಾಡಲು ಮನವಿ ಮಾಡಲಾಗಿದ್ದು, ಇದಕ್ಕೆ ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿಗಳು ಒಪ್ಪಿದ್ದಾರೆ ಎಂದರು.