ಮಂಗಳೂರು : ಉದ್ಯಮಿ ಮನ್ಸೂರ್ ಅಹ್ಮದ್ ಆಝಾದ್ ನೇತೃತ್ವದಲ್ಲಿ ವಲಸೆ ಕಾರ್ಮಿಕರಿಗೆ ಆಹಾರ ಪೂರೈಕೆ
ಮಂಗಳೂರು : ಮಾ. 30: ಲಾಕ್ಡೌನ್ನಿಂದಾಗಿ ಉತ್ತರ ಭಾರತ ಮೂಲದ ದಿನಗೂಲಿ ಕಾರ್ಮಿಕರು ನಗರದ ಬಂದರ್ ಪರಿಸರದಲ್ಲಿ ಸಿಲುಕಿಕೊಂಡಿದ್ದು, ಸುಮಾರು 500ಕ್ಕೂ ಅಧಿಕ ಕಾರ್ಮಿಕರಿಗೆ ಉದ್ಯಮಿ ಮನ್ಸೂರ್ ಅಹ್ಮದ್ ಆಝಾದ್ ನೇತೃತ್ವದ ಸಮಾಜ ಸೇವಕರ ತಂಡ ಮಧ್ಯಾಹ್ನ ಮತ್ತು ರಾತ್ರಿ ವೇಳೆ ಆಹಾರ ಪೂರೈಕೆ ಮಾಡುತ್ತಿದೆ.
ಉತ್ತರ ಪ್ರದೇಶ, ಬಿಹಾರ, ಅಸ್ಸಾಂ ಮತ್ತಿತರ ರಾಜ್ಯದ ಸುಮಾರು 1500 ಕ್ಕೂ ಅಧಿಕ ದಿನಗೂಲಿ ಕಾರ್ಮಿಕರು ಬಂದರ್ ಪರಿಸರದಲ್ಲಿ ಕಳೆದ 10 ದಿನಗಳಿಂದ ಕೆಲಸವಿಲ್ಲದೆ, ಊಟವಿಲ್ಲದೆ ಪರದಾಡುತ್ತಿದ್ದರು. ಇದರಿಂದ ಕಂಗಾಲಾದ ಕಾರ್ಮಿಕರು ಬಂದರ್ ಠಾಣೆಗೆ ತೆರಳಿ ತಮ್ಮ ಸಂಕಷ್ಟವನ್ನು ವಿವರಿಸಿದ್ದರು. ತಕ್ಷಣ ಇನ್ಸ್ಪೆಕ್ಟರ್ ಗೋವಿಂದರಾಜು ಉದ್ಯಮಿ ಮನ್ಸೂರ್ ಅಹ್ಮದ್ ಆಝಾದ್ ಅವರನ್ನು ಸಂಪರ್ಕಿಸಿ ಆಹಾರ ಪೂರೈಸುವಂತೆ ಕೋರಿಕೊಂಡಿದ್ದರು. ಅದರಂತೆ ಮನ್ಸೂರ್ ಅಹ್ಮದ್ ಆಝಾದ್, ಹಮೀದ್ ಪಚ್ಚೆಕಂಬ, ಅಲ್ತಾಫ್, ಅಬೂಸಾಲಿಹ್ ಅವರು ಕಳೆದೊಂದು ವಾರದಿಂದ ಸುಮಾರು 500ಕ್ಕೂ ಅಧಿಕ ಮಂದಿಗೆ ಮಧ್ಯಾಹ್ನ ಮತ್ತು ರಾತ್ರಿಯ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.
ಈ ಬಗ್ಗೆ 'ವಾರ್ತಾಭಾರತಿ' ಜೊತೆ ಮಾತನಾಡಿದ ಮನ್ಸೂರ್ ಅಹ್ಮದ್ ಆಝಾದ್ ಸಂಕಷ್ಟದಲ್ಲಿ ಸಿಲುಕಿದ ಕಾರ್ಮಿಕರು ಒಂದೋ ನಮ್ಮನ್ನು ಊರಿಗೆ ಕಳಿಸಿ, ಇಲ್ಲವೇ ರೇಶನ್ ಅಥವಾ ಆಹಾರ ಕೊಡಿ ಎಂದು ಭಿನ್ನವಿಸತೊಡಗಿದರು. ಹೊಟೇಲ್ ಅಥವಾ ರೇಶನ್ ಅಂಗಡಿ ತೆರೆಯದ ಕಾರಣ ಆಹಾರವಿಲ್ಲದೆ ತೊಂದರೆಗೀಡಾಗಿದ್ದರು. ಅವರಿಗೆ ನೆರವು ನೀಡಿದ ತೃಪ್ತಿ ನಮಗಿದೆ ಎಂದು ಹೇಳಿದ್ದಾರೆ.