ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶ : ಪ್ರಕರಣ ದಾಖಲು
ಪುತ್ತೂರು : ಸಾಮಾಜಿಕ ಜಾಲತಾಣದಲ್ಲಿ ಒಂದು ಸಮುದಾಯವನ್ನು ಅವಹೇಳನಕಾರಿಯಾಗಿ ನಿಂದಿಸಿ ಸಂದೇಶ ರವಾನಿಸಿದ ವ್ಯಕ್ತಿಯೊಬ್ಬರ ವಿರುದ್ಧ ಎಸ್ಡಿಪಿಐ ಮುಖಂಡ ಇಸಾಕ್ ಅರಿಯಡ್ಕ ಎಂಬವರು ಸಂಪ್ಯ ಪೊಲೀಸ್ ಠಾಣೆಗೆ ದೂರು ನಿಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪುತ್ತೂರು ತಾಲೂಕಿನ ಮಾಡ್ನೂರು ಗ್ರಾಮದ ಕಾವು ನಿವಾಸಿ ಯೋಗೀಶ್ ಎಂಬಾತ ಸಾಮಾಜಿಕ ಜಾಲತಾಣವಾದ ವಾಟ್ಸ್ಆ್ಯಪ್ ನಲ್ಲಿ ಒಂದು ನಿರ್ದಿಷ್ಟ ಸಮುದಾಯದ ವಿರುದ್ಧ ಕೋಮು ಪ್ರಚೋದಕ ಸಂದೇಶ ಹಾಕಿದ್ದು ಇದು ಸಮುದಾಯವನ್ನು ನಿಂದಿಸುವ ಉದ್ದೇಶದಿಂದ ಕೂಡಿದ್ದಾಗಿದೆ. ಮಾತ್ರವಲ್ಲದೆ ಕೋಮು ಗಲಭೆಗೆ ಪ್ರಚೋದನೆ ನೀಡುವಂತಿದೆ. ಈತನನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದರು. ದೂರಿಗೆ ಸಂಬಂಧಿಸಿ ಆರೋಪಿ ಯೋಗಿಶ್ ವಿರುದ್ಧ ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ.
ದೂರು ನೀಡುವ ಸಂದರ್ಭದಲ್ಲಿ ಎಸ್ಡಿಪಿಐ ಅರಿಯಡ್ಕ ಗ್ರಾಮ ಸಮಿತಿ ಅಧ್ಯಕ್ಷ ಮಹಮ್ಮದ್ ಜೆ, ಸದಸ್ಯರಾದ ಇರ್ಷಾದ್ ಕೌಡಿಚ್ಚಾರ್, ರಿಯಾಝ್ ಅರಿಯಡ್ಕ, ಇರ್ಷಾದ್, ಬಶೀರ್, ಆಶಿಕ್, ಜಂಶೀರ್ ಉಪಸ್ಥಿತರಿದ್ದರು.