ಉಡುಪಿ ಜಿಲ್ಲೆಯಲ್ಲಿ ಇಂದಿನಿಂದ ಪಡಿತರ ವಿತರಣೆ: ಸಚಿವ ಕೋಟ
ಉಡುಪಿ, ಮಾ.31: ಕೊರೋನಾ ಭೀತಿಯ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಎ.1ರಿಂದ ಪಡಿತರ ವಿತರಣೆ ಆರಂಭವಾಗಲಿದ್ದು, ಎರಡು ತಿಂಗಳ ಪಡಿತರ ವನ್ನು ಒಂದೇ ಬಾರಿಗೆ ವಿತರಿಸಲು ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳ ಲಾಗಿದೆ ಎಂದು ರಾಜ್ಯದ ಬಂದರು, ಮೀನುಗಾರಿಕೆ ಹಾಗೂ ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಕೊರೋನಾ ನಿಯಂತ್ರಣ ಸಂಬಂಧ ಉಡುಪಿ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದ ಕುರಿತ ಮಾಹಿತಿ ಯನ್ನು ಅವರು ಮಾಧ್ಯಮದವರಿಗೆ ನೀಡಿದರು.
ಜಿಲ್ಲೆಯ 292 ಸಹಕಾರಿ ಸಂಘಗಳ ಮೂಲಕ ರಾಜ್ಯ ಸರಕಾರದಿಂದ ಏಳು ಕೆ.ಜಿ. ಮತ್ತು ಕೇಂದ್ರ ಸರಕಾರದಿಂದ ಐದು ಕೆ.ಜಿ. ಅಕ್ಕಿಯನ್ನು ವಿತರಿಸುವ ಕಾರ್ಯ ಮಾಡಲಾಗುವುದು. ಅಲ್ಲಿ ಕೂಡ ಸಾಮಾಜಿಕ ಅಂತರವನ್ನು ಕಾಪಾಡ ಲಾಗುವುದು. ದಿನಕ್ಕೆ ನಿಗದಿತ ಸಂಖ್ಯೆಯ ಜನರಿಗೆ ಮಾತ್ರ ಪಡಿತರವನ್ನು ವಿತರಿಸಲಾಗುವುದು ಎಂದರು.
ಜಿಲ್ಲೆಯಲ್ಲಿರುವ ಅಂತ್ಯೋದಯ, ಬಿಪಿಎಲ್ ಮತ್ತು ಆಹಾರ ಪಡೆಯಲು ನೊಂದಾಯಿಸಿರುವ ಎಪಿಲ್ ಕಾರ್ಡ್ದಾರರಿಗೆ ಸರಕಾರದ ಸೂಚನೆಯಂತೆ, ಎರಡು ತಿಂಗಳ ಪಡಿತರವನ್ನು ವಿತರಿಸಲಾಗುತ್ತದೆ. ಪಡಿತರ ಪಡೆಯಲು ಒಟಿಪಿ ಸಂಖ್ಯೆಯನ್ನು ಕಡ್ಡಾಯಗೊಳಿಸದೇ, ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿಕೊಂಡು ವಿತರಿಸಲಾಗುವುದು. ಇದರ ಉಸ್ತುವಾರಿಯನ್ನು ಆಯಾ ತಾಲೂಕಿನ ತಹಶೀಲ್ದಾರು ವಹಿಸಿಕೊಳ್ಳಲಿರುವರು ಎಂದರು.
ಜಿಲ್ಲೆಯಲ್ಲಿ ದಿನಕ್ಕೆ 1250 ಮಂದಿ ಕೂಲಿಕಾರ್ಮಿಕರು, ನಿರಾಶ್ರಿತರು, ಭಿಕ್ಷುಕರಿಗೆ ಊಟವನ್ನು ನೀಡಲಾಗುತ್ತಿದೆ. ಸುಮಾರು 3850 ಮಂದಿ ಕಾರ್ಮಿಕ ರಿಗೆ ದಾನಿಗಳ ನೆರವಿನೊಂದಿಗೆ ಆಹಾರದ ಕಿಟ್ಗಳನ್ನು ವಿತರಿಸಲಾಗಿದೆ. ಕೃಷಿಗೆ ತೊಂದರೆ ಆಗದಂತೆ ಕಟಾವು ಯಂತ್ರ, ಟ್ಯಾಕ್ಟರ್ ಸಂಚರಿಸಲು ಅಡ್ಡಿಪಡಿಸದಂತೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.
ಶಾಲೆಗಳಲ್ಲಿ ಉಳಿದಿರುವ ಬಿಸಿಯೂಟದ ಅಕ್ಕಿಯನ್ನು ವಿದ್ಯಾರ್ಥಿಗಳ ಪೋಷಕರಿಗೆ ಹಾಗೂ ಅಂಗನವಾಡಿಯಲ್ಲಿ ಉಳಿದಿರುವ ಪೌಷ್ಠಿಕ ಆಹಾರಗಳನ್ನು ಗರ್ಭಿಣಿ ಮತ್ತು ಬಾಣಂತಿಯರ ಮನೆಗೆಳಿಗೆ ತಲುಪಿಸುವ ವ್ಯವಸ್ಥೆ ಮಾಡ ಲಾಗುತ್ತದೆ ಎಂದ ಅವರು, ಜಿಲ್ಲೆಯಲ್ಲಿ ಸಾರ್ವಜನಿ ಕರಿಗೆ ದಿನಸಿ ವಸ್ತುಗಳ ಖರೀದಿಗೆ ನಿಗದಿ ಪಡಿಸಿರುವ ಸಮಯದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದು ಕೊಳ್ಳಬೇಕು ಎಂದು ಅವರು ತಿಳಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ಚಂದ್ರ ಶೆಟ್ಟಿ, ಜಿಪಂ ಅಧ್ಯಕ್ಷ ದಿನಕರ ಬಾಬು, ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಪಂ ಸಿಇಓ ಪ್ರೀತಿ ಗೆಹ್ಲೋಟ್, ಎಸ್ಪಿ ವಿಷ್ಣುವರ್ಧನ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಲ್ಯಾಬ್ ಬಗ್ಗೆ ಸಿಎಂ ಜೊತೆ ಚರ್ಚೆ
ಜಿಲ್ಲೆಯಲ್ಲಿ ಕೊರೋನ ಪತ್ತೆ ಹಚ್ಚುವ ಲ್ಯಾಬ್ ತೆರೆಯಲು ಎಲ್ಲಾ ಅಗತ್ಯ ಮೂಲಭೂತ ಸೌಲಭ್ಯಗಳಿದ್ದು, ಕೂಡಲೇ ಲ್ಯಾಬ್ಗೆ ಅನುಮತಿ ನೀಡುವಂತೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು ಎಂದು ಸಚಿವ ಕೋಟ ತಿಳಿಸಿದರು.
ಸಾಂಪ್ರದಾಯಿಕ ಮೀನುಗಾರಿಕೆಗೆ ಅನುಮತಿ ನೀಡುವ ಕುರಿತು ಅಧಿಕಾರಿ ಗಳೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಎಲ್ಲರು ಮನೆಯಲ್ಲಿಯೇ ಉಳಿದುಕೊಂಡು ಸಹಕಾರ ನೀಡು ವುದು ಉತ್ತಮ ಎಂದು ಅವರು ಹೇಳಿದರು.