‘ಹಸಿವಿನಿಂದ ಬಳಲುವವರಿಗೆ ದೇವಾಲಯಗಳ ಊಟೋಪಚಾರ’
ಉಡುಪಿ, ಮಾ.31: ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟಲು ವಿಧಿಸಿರುವ ನಿರ್ಬಂಧಗಳಿಂದ, ದುಡಿಯಲು ಸಾಧ್ಯವಾಗದೇ ಹಸಿವಿನಿಂದ ಬಳಲುತ್ತಿರುವ ಕೂಲಿ ಕಾರ್ಮಿಕರಿಗೆ ಮತ್ತು ನಿರಾಶ್ರಿತರಿಗೆ ಶೆಲ್ಟರ್ ರೂಂಗಳಲ್ಲಿ ಸೂಕ್ತ ವಸತಿ ಮತ್ತು ಊಟೋಪಚಾರದ ವ್ಯವಸ್ಥೆ ಒದಗಿಸಲು ಜಿಲ್ಲಾಡಳಿತ ಸೂಚಿಸಿದೆ.
ಇದಕ್ಕಾಗಿ ತಗಲುವ ವೆಚ್ಚವನ್ನು ಜಿಲ್ಲೆಯ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿ ಯಲ್ಲಿ ಬರುವ ಶ್ರೀಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನ ಅಂಬಲಪಾಡಿ, ಶ್ರೀಹೊಸ ಮಾರಿಗುಡಿ ದೇವಸ್ಥಾನ ಕಾಪು, ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನ ಮಂದಾರ್ತಿ, ಶ್ರೀಮೂಕಾಂಬಿಕಾ ದೇವಸ್ಥಾನ ಕೊಲ್ಲೂರು, ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನ ಮುಂಡ್ಕೂರು, ಶ್ರೀಅನಂತ ಪದ್ಮನಾಭ ಮತ್ತು ಅರ್ಧ ನಾರೀಶ್ವರ ದೇವಸ್ಥಾನ ಹೆಬ್ರಿ, ಈ ದೇವಾಲಯಗಳ ನಿಧಿಯಿಂದ ಭರಿಸಲು ಆಯಾ ತಾಲೂಕಿನ ಅವಶ್ಯಕತೆಗೆ ಸಂಬಂದಿಸಿದಂತೆ, ಸ್ಥಳೀಯ ತಹಶೀಲ್ದಾರ್ ಗಳು, ಸಂಬಂದಿಸಿದ ದೇವಾಲಯಗಳ ಆಡಳಿತಾಧಿಕಾರಿ/ಕಾರ್ಯ ನಿರ್ವಹಣಾ ಧಿಕಾರಿ/ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು/ಆಡಳಿತ ಮೊಕ್ತೇಸರರಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ.