ಕೃಷಿ ಚಟುವಟಿಕೆಗೆ ಅಗ್ಯ ವಸ್ತುಗಳ ವಿತರಣೆ: ಜಿಲ್ಲಾಧಿಕಾರಿ
ಉಡುಪಿ, ಮಾ.31:ದೇಶದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್-19 ವೈರಸ್ನ ಕಾರಣಕ್ಕಾಗಿ ರಾಜ್ಯದಲ್ಲಿ ಲಾಕ್ಡೌನ್ ಘೋಷಣೆ ಯಾಗಿದ್ದು, ಇದರಿಂದ ರೈತರಿಗೆ ಕೃಷಿ ಪರಿಕರಗಳ ಲಭ್ಯತೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗುತ್ತಿದೆ. ಕೃಷಿ ಚಟುವಟಿಕೆಗಳಿಗೆ ಸಹಾಯಕವಾಗುವಂತೆ ಅಗತ್ಯ ವಸ್ತುಗಳಾದ ಬೀಜ, ಗೊಬ್ಬರ, ಕೀಟನಾಶಕಗಳು, ಕೃಷಿ ಕೊಯ್ಲು ಯಂತ್ರೋಪಕರಣಗಳ ಸಾಗಣೆಗೆ ಜಿಲ್ಲೆಯಲ್ಲಿ ಅಗತ್ಯಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಅಗತ್ಯ ವಸ್ತುಗಳ ಸೇವೆಯಡಿ ಕೃಷಿ ಪರಿಕರಗಳಾದ ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ ಹಾಗೂ ಕೃಷಿ ಯಂತ್ರೋಪಕರಣಗಳು ಸೇರುವುದರಿಂದ ಇವುಗಳ ವಿತರಣೆ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೋವಿಡ್-19 ಸೋಂಕು ಹರಡುಕೆಯನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಿರುವ ಸೂಚನೆಗಳನ್ನು ಹಾಗೂ ಸುರಕ್ಷಿತ ಕ್ರಮಗಳನ್ನು ತಪ್ಪದೆ ಪಾಲಿಸುವಂತೆ ವಿತರಕರಿಗೆ ಕಡ್ಡಾಯಗೊಳಿಸಲಾಗಿದೆ.
ವಿತರಣಾ ಸಮಯದಲ್ಲಿ ಗೊಂದಲಗಳಿಗೆ ಅವಕಾಶ ಮಾಡಿಕೊಡಬಾರದು. ಪರಿಕರಗಳನ್ನು ಖರೀದಿಸುವ ವೇಳೆ ರೈತರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರಾಟ ಮಳಿಗೆಯ ಮುಂಭಾಗದಲ್ಲಿ ಗುರುತುಗಳನ್ನು ಮಾಡಬೇಕು. ರೈತರಿಗೆ ಸ್ಯಾನಿಟೈಜರ್ಸ್/ಸಾಬೂನು ಮತ್ತು ನೀರಿನ ವ್ಯವಸ್ಥೆ ಯನ್ನು ಮಾರಾಟ/ವಿತರಕರು ಮಾಡಬೇಕು. ಆದಷ್ಟು ಮಂದಿ ಮಾಸ್ಕ್ಗಳನ್ನು ಹಾಕಿಕೊಳ್ಳಲು ಸೂಚನೆಗಳನ್ನು ನೀಡಬೇಕು.
ಕೋವಿಡ್-19 ಸೋಂಕು ಹರಡುವಿಕೆಯನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ನೀಡಿರುವ ಸೂಚನೆಗಳನ್ನು ಹಾಗೂ ಸುರಕ್ಷಿತ ಕ್ರಮಗಳನ್ನು ಉಲ್ಲಂಸುವ ಮಾರಾಟ ಹಾಗೂ ವಿತರಕರ ಪರವಾನಗಿಯನ್ನು ಅಮಾನತು/ರದ್ದುಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.
ರೈತರಿಗೆ ಕೃಷಿಗೆ ಬೇಕಾದ ಅಗತ್ಯ ವಸ್ತುಗಳನ್ನು ಸಾಗಿಸಲು ವಾಹನ ವ್ಯವಸ್ಥೆ ಮಾಡುವಲ್ಲೂ ಕ್ರಮ ವಹಿಸಬೇಕು. ಇವುಗಳನ್ನು ಮಾರಾಟ ಮಾಡಲು ಹಾಗೂ ಖರೀದಿಸಲು ಬೆಳಗ್ಗೆ 7:00ರಿಂದ 11:00ರವರೆಗೆ ಸಮಯ ನಿಗದಿ ಪಡಿಸ ಲಾಗಿದೆ.ಕೃಷಿ ಚಟುವಟಿಕೆಗಳಿಗೆ ಅನುಕೂಲ ವಾಗುವಂತೆ ಅಗತ್ಯ ವಸ್ತುಗಳ ವಿತರಣೆಯ ವೇಳೆ ಮೇಲಿನ ಎಲ್ಲಾ ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ.