ಕೊರೋನ ನಿಯಂತ್ರಣ: ಫೀಲ್ಡ್ಗಿಳಿದು ಶ್ರಮಿಸುತ್ತಿರುವ ರೆಡ್ಕ್ರಾಸ್
ಮಂಗಳೂರು, ಎ.1: ಇಂಡಿಯನ್ ರೆಡ್ಕ್ರಾಸ್ ಸೊಸೈಟಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಆಹಾರವಿಲ್ಲದೆ ಸಂಕಷ್ಟ ಪಡುತ್ತಿರುವ ಬಡವರಿಗೆ ದೈನಂದಿನ ತುರ್ತು ಅಗತ್ಯ ಸಾಮಗ್ರಿಗಳನ್ನು ಪೂರೈಸಲಾಗುತ್ತಿದೆ.
ದಿನಸಿ ಸಾಮಗ್ರಿಗಳಾದ ಅಕ್ಕಿ, ಇಡ್ಲಿ ರವ, ರಾಗಿ ಹುಡಿ, ಗೋಧಿಹುಡಿ, ಸಜ್ಜಿಗೆ, ಅವಲಕ್ಕಿ, ಸೇವಿಗೆ, ಮೆಣಸಿನ ಹುಡಿ, ಅರಸಿನ ಹುಡಿ, ಅಡುಗೆ ಎಣ್ಣೆ, ಸಾಬೂನು ಇತ್ಯಾದಿಗಳನ್ನು ಅವರ ಮನೆ ಬಾಗಿಲಿಗೆ ತೆರಳಿ ನೀಡಲಾಯಿತು. ಯೆಯ್ಯಾಡಿ ಕೈಗಾರಿಕಾ ಪ್ರದೇಶದ ಸುಮಾರು 50 ಬಡ ಕುಟುಂಬಗಳಿಗೆ ರೆಡ್ಕ್ರಾಸ್ ಸದಸ್ಯರು ಇದನ್ನು ್ನ ಹಸ್ತಾಂತರಿಸಿದರು. ಈ ಸಂದರ್ಭ ಕೊರೋನ ಬಗ್ಗೆ ಜಾಗೃತಿ ಮೂಡಿಸಿ ಮನೆಯಲ್ಲಿಯೇ ಇರುವಂತೆ ಮನವರಿಕೆ ಮಾಡಲಾಯಿತು.
ಜಾಗೃತಿ ವಾಹನ
ರೆಡ್ಕ್ರಾಸ್ ಮತ್ತು ಕಾರ್ಮಿಕ ಇಲಾಖೆ ಜಂಟಿಯಾಗಿ ಕೊರೋನ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಾಹನಗಳ ಮೂಲಕ ನಗರದಲ್ಲಿ ಜಾಗೃತಿ ಮೂಡಿಸುವ ಜತೆಗೆ ಪೊಲೀಸರಿಗೆ, ಪತ್ರಕರ್ತರಿಗೆ ಹಾಗೂ ಸಾರ್ವಜನಿಕರಿಗೆ ಮಾಸ್ಕ್ಗಳನ್ನು ವಿತರಿಸಲಾಯಿತು.
ಕಂಟ್ರೋಲ್ ರೂಮ್ನಲ್ಲಿ ಸೇವೆ
ಕೊರೋನ ನಿಯಂತ್ರಣದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಮಂಗಳೂರು ಮಹಾನಗರ ಪಾಲಿಕೆಯ ಕಟ್ಟಡದಲ್ಲಿ ಸ್ಥಾಪನೆ ಮಾಡಿರುವ ಕಂಟ್ರೋಲ್ ರೂಮ್ನಲ್ಲಿ ರೆಡ್ಕ್ರಾಸ್ ಸೇವಾಕರ್ತರು ಕೊರೋನ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ.