ಎಪ್ರಿಲ್-ಮೇ ಪಡಿತರ ಸಾಮಗ್ರಿ ವಿತರಣೆಗೆ ಕ್ರಮ: ಮಂಗಳೂರು ತಹಶೀಲ್ದಾರ್
ಮಂಗಳೂರು, ಎ.1: ಎಪ್ರಿಲ್ ಹಾಗೂ ಮೇ ತಿಂಗಳ ಪಡಿತರ ಸಾಮಾಗ್ರಿಗಳು ಈ ತಿಂಗಳ ಮೊದಲ ವಾರದಲ್ಲಿ ವಿತರಿಸಲಾಗುವುದು. ಫಲಾನುಭವಿಗಳು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳನ್ನು ಸಂಪರ್ಕಿಸಬೇಕು ಎಂದು ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ತಿಳಿಸಿದ್ದಾರೆ.
ಎಪ್ರಿಲ್ ನಲ್ಲಿ ಒಬ್ಬ ಸದಸ್ಯರಿಗೆ 5 ಕೆಜಿ ಅಕ್ಕಿಯಂತೆ ಮೇ ತಿಂಗಳದ್ದನ್ನೂ ಸೇರಿಸಿ ಬಿಪಿಎಲ್ ಪಡಿತರ ಚೀಟಿಗಳಿಗೆ ವಿತರಿಸಲಾಗುವುದು. ಅಂತ್ಯೋದಯ ಪಡಿತರ ಚೀಟಿಗಳಿಗೆ ತಲಾ 35 ಕೆಜಿ ಅಕ್ಕಿ ವಿತರಿಸಲಾಗುವುದು. ಪ್ರತೀ ಬಿಪಿಎಲ್ ಪಡಿತರ ಚೀಟಿಗೆ 2 ಕೆಜಿ ಗೋಧಿ ವಿತರಿಸಲಾಗುವುದು (2 ತಿಂಗಳದ್ದು ಸೇರಿ ಒಟ್ಟು 4 ಕೆಜಿ ).
ಅಕ್ಕಿ ಬೇಕು ಎಂದು ಸಮ್ಮತಿ ನೀಡಿದ ಎಪಿಎಲ್ ಪಡಿತರ ಚೀಟಿಗಳಿಗೆ ಏಕ ಸದಸ್ಯ- 5 ಕೆಜಿ ಹಾಗೂ ಎರಡು ಅಥವಾ ಹೆಚ್ಚು ಸದಸ್ಯರುಳ್ಳ ಪಡಿತರ ಚೀಟಿಗೆ 10 ಕೆಜಿ ಅಕ್ಕಿ (ಕೆಜಿಗೆ 15 ರೂ. ದರದಲ್ಲಿ) ವಿತರಿಸಲಾಗುವುದು.
ಕೇಂದ್ರ ಸರಕಾರ ಘೋಷಿಸಿದ ಉಚಿತ ಗ್ಯಾಸ್ ಪೂರೈಕೆಯು ಕೇವಲ ಉಜ್ವಲ್ ಯೋಜನೆಯ ಫಲಾನುಭವಿಗಳಿಗೆ ಮಾತ್ರ ವಿತರಿಸಲಾಗುತ್ತದೆ. ಎಲ್ಲಾ ಬಿಪಿಎಲ್ ಕಾರ್ಡುದಾರರಿಗೆ ಅನ್ವಯಿಸುವುದಿಲ್ಲ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.