ಬೈಂದೂರು: ಲಾರಿ ಫಲ್ಟಿ; ಕ್ಲೀನರ್ ಮೃತ್ಯು
ಬೈಂದೂರು, ಎ.3: ಇನ್ಸುಲೇಟರ್ ಲಾರಿಯೊಂದು ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದ ಪಡುವರಿ ಗ್ರಾಮದ ಒತ್ತಿನೆಣೆ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾದ ಕಾರಣ ಅದರ ಅಡಿಗೆ ಸಿಕ್ಕಿಬಿದ್ದ ಕ್ಲೀನ್ ಮೃತಪಟ್ಟ ಘಟನೆ ಅಪರಾಹ್ನ 1:45ರ ಸುಮಾರಿಗೆ ನಡೆದಿದೆ.
ಮೃತರನ್ನು ಕೋಡಿ ನಿವಾಸಿ ಅಹ್ಮದ್ ಹಾಜಿ ಎಂಬವರ ಪುತ್ರ ಇರ್ಫಾನ್ (25) ಎಂದು ಗುರುತಿಸಲಾಗಿದೆ. ಕುಂದಾಪುರ ಕಡೆಯಿಂದ ಲಾರಿಯನ್ನು ಅದರ ಚಾಲಕ ಮುಹಮ್ಮದ್ ಶರೀಫ್ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಒತ್ತಿನೆಣೆ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡಿದ್ದು, ಪಶ್ಚಿಮ ಬದಿಯ ಚರಂಡಿಗೆ ಹಾರಿದ ಲಾರಿ ಎಡಮಗ್ಗುಲಾಗಿ ಬಿದ್ದ ಪರಿಣಾಮ ಕ್ಲೀನರ್ ಇರ್ಫಾನ್ ಲಾರಿಯ ಎದುರಿನ ಬಾಗಿಲ ಅಡಿಯಲ್ಲಿ ಸಿಲುಕಿದ್ದರು.
ತಕ್ಷಣ ಸಾರ್ವಜನಿಕರು ಲಾರಿಯನ್ನು ಎತ್ತಿ ಇರ್ಫಾನ್ ಹಾಗೂ ಚಾಲಕನನ್ನು ಅಂಬುಲೆನ್ಸ್ನಲ್ಲಿ ಬೈಂದೂರು ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೂ, ಮಾರ್ಗದಲ್ಲಿ ಇರ್ಫಾನ್ ಮೃತಪಟ್ಟರೆಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.