ಮುಖ್ಯಮಂತ್ರಿ ಮೊದಲು ಶೋಭಾ ವಿರುದ್ಧ ಕ್ರಮಕೈಗೊಳ್ಳಲಿ: ಸಿಪಿಐಎಂ
ಉಡುಪಿ, ಎ.6: ಯಾವುದೋ ಘಟನೆಯನ್ನು ಮುಂದಿಟ್ಟು ಮುಸ್ಲಿಮರ ಬಗ್ಗೆ ತಪ್ಪಾಗಿ ಮಾತನಾಡಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಮೊದಲು ಶೋಭಾ ಕರಂದ್ಲಾಜೆ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಉಡುಪಿ ಜಿಲ್ಲಾ ಸಿಪಿಐಎಂ ಒತ್ತಾಯಿಸಿದೆ.
ಅನೇಕ ದಿನಗಳಿಂದ ಕಾಣೆಯಾಗಿದ್ದ ಶೋಭಾ ಕರಂದ್ಲಾಜೆ, ಹಠಾತ್ತಾಗಿ ಉಡುಪಿ ಜಿಲ್ಲೆಗೆ ಬಂದು ಏನೇನೋ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೊರೋನ ಭೀತಿಯಿಂದ ಕೆಲಸ ಇಲ್ಲದೆ ಬಳಲಿರುವ ವಲಸೆ ಕಾರ್ಮಿಕರು, ಬೀಡಿ ಕಾರ್ಮಿಕರು, ಬಸ್ಸು, ರಿಕ್ಷಾ ಸೇರಿದಂತೆ ಸಾರಿಗೆ ಮತ್ತು ಇತರೆ ಅಸಂಘಟಿತ ಕಾರ್ಮಿಕರಿಗೆ ಸಾಂತ್ವನ ಹೇಳುವುದನ್ನು ಬಿಟ್ಟು, ಕೋಮು ಭಾವನೆಯನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಿಪಿಐಎಂ ದೂರಿದೆ.
ಇಡೀ ದೇಶ ಕೊರೋನ ಬಾಧೆಯಿಂದ ತತ್ತರಿಸುವಾಗ ಕರಾವಳಿ ಜಿಲ್ಲೆಗಳ 6 ಟೋಲ್ ಗೇಟ್ಗಳಲ್ಲಿ ಶುಲ್ಕ ದರ ಹೆಚ್ಚಿಸಿರುವುದು ಶೋಭಾ ಅವರ ಗಮನಕ್ಕೆ ಬಂದಿಲ್ಲವೇ? ಈಗ ರಸ್ತೆಯಲ್ಲಿ ಹೆಚ್ಚಾಗಿ ಚಲಿಸುತಿರುವುದು ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳು ಮಾತ್ರ. ಈ ಸಂದರ್ಭದಲ್ಲಿ ಶುಲ್ಕ ಹೆಚ್ಚಿಸುವುದು ಅಪರಾಧ. ಕೋಮು ಭಾವನೆಯನ್ನು ಕೆರಳಿಸುವ ಬದಲು ಅಂತಹ ಸಮಸ್ಯೆಗಳ ಬಗ್ಗೆ ಗಮನ ನೀಡಬೇಕು ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.