ಮುಖ್ಯಮಂತ್ರಿ ನಡೆಗೆ ಮುಸ್ಲಿಂ ಸೆಂಟ್ರಲ್ ಕಮಿಟಿ ಶ್ಲಾಘನೆ
ಮಂಗಳೂರು, ಎ.7: ಜಗತ್ತಿನಾದ್ಯಂತ ಹರಡಿರುವ ಮಾರಕ ಕೊರೋನ ವೈರಸ್(ಕೋವಿಡ್-19) ನಿಗ್ರಹದ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಘೋಷಿಸಿದ ಲಾಕ್ಡೌನ್ ಅನ್ನು ಮುಸ್ಲಿಂ ಸಮುದಾಯ ಸೇರಿ ಎಲ್ಲ ವರ್ಗದ ಜನ ಬೆಂಬಲಿಸುತ್ತಿದ್ದಾರೆ. ಆದರೆ, ಕೆಲವು ಕೋಮುವಾದಿಗಳು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಮರನ್ನು ನಿಂದಿಸುತ್ತಿರುವುದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಖಂಡಿಸಿರುವುದು ನಿಜಕ್ಕೂ ಪ್ರಶಂಸನೀಯ ಎಂದು ದ.ಕ. ಮತ್ತು ಉಡುಪಿ - ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ.ಎಸ್. ಮುಹಮ್ಮದ್ ಮಸೂದ್, ಉಪಾಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್ ಮತ್ತು ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್ ತಿಳಿಸಿದ್ದಾರೆ.
ಅಲ್ಲದೆ ತಪ್ಪಿತಸ್ಥರ ವಿರುದ್ಧ ಕೂಡಲೇ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು, ಪೊಲೀಸ್ ಕಮಿಷನರ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳನ್ನು ವಿನಂತಿಸಿದ್ದಾರೆ. ಹಾಗೆಯೇ ಶಬೇ ಬರಾಅತ್ ಹಬ್ಬವನ್ನು ದ.ಕ. ಮತ್ತು ಉಡುಪಿ ಖಾಝಿಯವರ ನಿರ್ದೇಶನದಂತೆ ಎಲ್ಲರೂ ಅವರವರ ಮನೆಯಲ್ಲಿ ಆಚರಿಸುವಂತೆ ಪ್ರಕಟನೆಯಲ್ಲಿ ಮನವಿ ಮಾಡಿದ್ದಾರೆ.