ಕೇರಳದಿಂದ ಕರ್ನಾಟಕಕ್ಕೆ ಸಮುದ್ರ ತೀರದ ಮೂಲಕ ಬರುವ ಆರೋಪ: ಕರಾವಳಿ ಕಾವಲು ಪೊಲೀಸ್ ಘಟಕ ತೀವ್ರ ಗಸ್ತು
ಮಂಗಳೂರು, ಎ.7: ಕೊರೋನ ವೈರಸ್ ಹರಡುವ ಭೀತಿಯ ಮಧ್ಯೆಯೇ ಕೇರಳದಿಂದ ಕರ್ನಾಟಕಕ್ಕೆ ಸಮುದ್ರ ತೀರ ಪ್ರದೇಶದಿಂದ ಜನರು ಒಳ ಬರುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕರಾವಳಿ ಕಾವಲು ಪೊಲೀಸ್ ಘಟಕವು ತೀವ್ರ ಗಸ್ತು ನಡೆಸುತ್ತಿದೆ ಎಂದು ಪ್ರಕಟನೆ ತಿಳಿಸಿದೆ.
ಘಟಕದ ಎಸ್ಪಿ ಚೇತನ್ ಆರ್. ತನ್ನ ಅಧೀನ ಅಧಿಕಾರಿಗಳ ಜೊತೆ ಕೇರಳ -ಕರ್ನಾಟಕದ ಗಡಿ ಭಾಗದ ಲ್ಯಾಂಡಿಂಗ್ ಪಾಯಿಂಟ್ಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಿನದ 24 ಗಂಟೆಯು ಕರಾವಳಿ ಕಾವಲು ಪೊಲೀಸ್ ಘಟಕದ ಇಂಟರ್ಸೆಪ್ಟರ್ ಬೋಟ್ ಗಳಿಂದ ಗಸ್ತು ನಿರ್ವಹಿಸಲು ಹಾಗೂ ಲ್ಯಾಂಡಿಂಗ್ ಪಾಯಿಂಟ್ಗಳಲ್ಲಿ ಈ ಹಿಂದೆ ಚಾಲ್ತಿಯಲ್ಲಿದ್ದ ಪಾಯಿಂಟ್ ಕರ್ತವ್ಯದೊಂದಿಗೆ ಸಿಎಸ್ಪಿ ಠಾಣೆಯ ಅಧಿಕಾರಿ/ಸಿಬ್ಬಂದಿ ವರ್ಗಹಾಗೂ ಕೆಎನ್ಡಿ ಸಿಬ್ಬಂದಿ ವರ್ಗವು ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ.
ಯಾವುದೇ ರೀತಿಯಲ್ಲಿ ತೀರ ಪ್ರದೇಶದಲ್ಲಿ ಕೇರಳ ರಾಜ್ಯದಿಂದ ಕರ್ನಾಟಕಕ್ಕೆ ಯಾರು ಆಗಮಿಸದಂತೆ ಸೂಕ್ತ ಎಚ್ಚರಿಕೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.