ಸೆಂಟ್ರಲ್ ಮಾರ್ಕೆಟ್ ಬೈಕಂಪಾಡಿಗೆ ಸ್ಥಳಾಂತರ ಮಾಡುವ ಆದೇಶವನ್ನು ಕೈಬಿಡಬೇಕು: ಎಸ್.ಡಿ.ಪಿ.ಐ ಒತ್ತಾಯ
ಮಂಗಳೂರು: ಸೆಂಟ್ರಲ್ ಮಾರ್ಕೆಟ್ ನಲ್ಲಿರುವ ಚಿಲ್ಲರೆ ವ್ಯಾಪಾರಿಗಳನ್ನು ಕೊರೋನ ವೈರಸ್ ಭೀತಿಯಲ್ಲಿ ಬೈಕಂಪಾಡಿಗೆ ಸ್ಥಳಾಂತರ ಮಾಡಲು ಇಲ್ಲಿನ ಸ್ಥಳೀಯ ಶಾಸಕರು ಆದೇಶ ನೀಡಿರುವುದು ಖಂಡನೀಯ ಎಂದು ಎಸ್ ಡಿ ಪಿ ಐ ಪ್ರಕಟನೆಯಲ್ಲಿ ತಿಳಿಸಿದೆ.
50 ವರ್ಷಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಮತ್ತು ಸಗಟು ಮತ್ತು ಚಿಲ್ಲರೆ ವ್ಯಾಪಾರ ಕೇಂದ್ರ ಇರುವ ಈ ಮಾರ್ಕೆಟ್ ನಲ್ಲಿ ದ.ಕ ಜಿಲ್ಲೆಯ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ವರ್ಗದ ಜನತೆಗೆ ಈ ಮಾರ್ಕೆಟ್ ಮಧ್ಯ ಭಾಗದಲ್ಲಿದ್ದು ಸಮಯಕ್ಕೆ ಸರಿಯಾಗಿ ಸಾರಿಗೆ ಸಂಪರ್ಕ ಕೂಡ ಹೊಂದಿರುವುದರಿಂದ ಎಲ್ಲಾ ವಿಧದಲ್ಲೂ ಕೂಡ ಜನರಿಗೆ ಸಹಕಾರಿಯಾಗುವ ರೀತಿಯಲ್ಲಿ ಇದೆ. ಆದರೆ ಇಲ್ಲಿನ ಸ್ಥಳೀಯ ಶಾಸಕರಾದ ವೇದವ್ಯಾಸ ಕಾಮತ್ ರವರು ಕೊರೋನ ವೈರಸ್ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಪಾಡುವ ನೆಪದಲ್ಲಿ ರಾಜಕೀಯ ದುರುದ್ದೇಶದಿಂದ ಚಿಲ್ಲರೆ ವ್ಯಾಪಾರಿಗಳನ್ನು ಪರ್ಮನೆಂಟ್ ಆಗಿ ಸ್ಥಳಾಂತರ ಮಾಡುವುದು ಅಕ್ಷಮ್ಯವಾಗಿದೆ.
ಒಂದು ವೇಳೆ ಇವರಿಗೆ ಸಾಮಾಜಿಕ ಅಂತರವನ್ನು ಕಾಪಾಡಿ ಬಡ ವ್ಯಾಪಾರಿಗಳ ಹಿತ ಕಾಪಾಡಬೇಕೆಂಬ ಇರಾದೆ ಇದ್ದರೆ ಮಂಗಳೂರಿನ ಹೃದಯ ಭಾಗದಲ್ಲೇ ತಾತ್ಕಾಲಿಕ ವಾಗಿ ಮಾರ್ಕೆಟ್ ಮಾಡಲು ಎರಡು ಕಡೆಗಳಲ್ಲಿ ಸ್ಥಳಾವಕಾಶ ಗಳಿದೆ. ಒಂದು ಸ್ಟೇಟ್ ಬ್ಯಾಂಕ್ ಹಳೇ ಬಸ್ಟಾಂಡ್ ಪಕ್ಕದಲ್ಲಿ ಹಾಗೂ ಇನ್ನೊಂದು ಕಂಕನಾಡಿ ಸಮೀಪದ ಗಣೇಶ್ ಮೆಡಿಕಲ್ ಬದಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಉದ್ದಕ್ಕೆ ನಿರ್ಮಿಸಿದ ಮಾರ್ಕೆಟ್ ಇದೆ ,ಇವೆರಡೂ ಕಡೆಗಳಲ್ಲಿ ಕೂಡ ಸದ್ಯಕ್ಕೆ ಸಾಮಾಜಿಕ ಅಂತರವನ್ನು ಕಾಪಾಡುವ ನಿಟ್ಟಿನಲ್ಲಿ ತಾತ್ಕಾಲಿಕ ಮಾರುಕಟ್ಟೆ ಯನ್ನು ಮಾಡಬಹುದಾಗಿದೆ. ಆದರೆ ಇದ್ಯಾವುದಕ್ಕು ಸ್ಥಳೀಯ ಬಿಜೆಪಿ ಶಾಸಕರು ಗುಮಾನಿ ಕೊಡದೇ ಬಡ ಚಿಲ್ಲರೆ ವ್ಯಾಪಾರಿಗಳನ್ನು ಮಾತ್ರ ದೂರವಿಟ್ಟು ಬಂಡವಾಳ ಶಾಹಿಗಳಿಗೆ ಮಣೆ ಹಾಕಬೇಕೆಂಬ ಏಕೈಕ ಉದ್ದೇಶದಿಂದ ಸೆಂಟ್ರಲ್ ಮಾರ್ಕೆಟ್ ನ್ನು ಹೋಲ್ ಸೇಲ್ ವ್ಯಾಪಾರಿಗಳಿಗೆ ಮಾತ್ರ ವ್ಯಾಪಾರ ನಡೆಸಲು ಅವಕಾಶ ಮಾಡಿಕೊಟ್ಟು ಬಡವರ ಹೊಟ್ಟೆಗೆ ಕಲ್ಲು ಹಾಕುವಂತಹ ಕೆಲಸಕ್ಕೆ ಇಳಿದಿರುವುದು ವಿಪರ್ಯಸವಾಗಿದೆ. ಆದ್ದರಿಂದ ದ.ಕ ಜಿಲ್ಲಾಧಿಕಾರಿ ಮಧ್ಯಪ್ರವೇಶ ಮಾಡಿ ಎಲ್ಲರಿಗೂ ಎಲ್ಲಾ ರೀತಿಯಿಂದಲೂ ಸಹಕಾರಿಯಾಗಿರುವ ಸೆಂಟ್ರಲ್ ಮಾರ್ಕೆಟ್ ನ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡುವ ನಿಟ್ಟಿನಲ್ಲಿ ಕಾರ್ಯಪ್ರವರ್ತರಾಗಬೇಕು ಇಲ್ಲದಿದ್ದಲ್ಲಿ ಎಸ್ ಡಿ ಪಿ ಐ ವತಿಯಿಂದ ಮುಂದಿನ ಹೋರಾಟವನ್ನು ಕೈಗೊಳ್ಳಲಿದ್ದೇವೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸುಹೈಲ್ ಖಾನ್ ಫಳ್ನೀರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.