ಉಡುಪಿ ಜಿಲ್ಲೆ: ಸಿಡಿಲು ಬಡಿದು ಹಾನಿ
ಉಡುಪಿ, ಎ.8: ಮಂಗಳವಾರ ಉಡುಪಿ ಜಿಲ್ಲೆಯಾದ್ಯಂತ ಸಿಡಿಲು- ಗುಡುಗು-ಮಿಂಚಿನೊಂದಿಗೆ ಸುರಿದ ಈ ವರ್ಷದ ಮೊದಲ ಮಳೆಗೆ ಅಲ್ಲಲ್ಲಿ ಹಾನಿ ಸಂಭವಿಸಿದ ವರದಿಗಳು ಬಂದಿವೆ.
ಜಿಲ್ಲೆಯ ಅಲ್ಲಲ್ಲಿ ಮನೆಗಳ ಹಾಗೂ ಕಟ್ಟಡಗಳ ಮೇಲೆ ಮರಗಳು ಉರುಳಿ ನಷ್ಟ ಸಂಭವಿಸಿದರೆ, ಕುಂದಾಪುರ ತಾಲೂಕಿನಲ್ಲಿ ಬಡಿದ ಸಿಡಿಲಿಗೆ ಒಂದು ಮೃತಪಟ್ಟು, ಕೆಲವಾರು ಮನೆಗಳಿಗೆ ಅಪಾರ ಹಾನಿ ಸಂಭವಿಸಿದೆ.
ಕುಂದಾಪುರ ತಾಲೂಕು ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಚಂದ್ರಶೇಖರ ಎಂಬವರ ಮನೆಯ ಕೊಟ್ಟಿಗೆಗೆ ಸಿಡಿಲು ಬಡಿದು ಮನೆಯಲ್ಲಿದ್ದ ಜಾನುವಾರು ಮೃತಪಟ್ಟಿದೆ. ಇದರಿಂದ 50 ಸಾವಿರ ರೂ.ನಷ್ಟ ಸಂಭವಿಸಿದ ಅಂದಾಜು ಮಾಡಲಾಗಿದೆ.
ಕುಂದಾಪುರ ತಾಲೂಕು ಕುಂಭಾಶಿಯ ಗಣೇಶ ಶೆಣೈ ಹಾಗೂ ಬೇಳೂರು ಗ್ರಾಮದ ಸುಧಾಕರ ಶೆಟ್ಟಿ ಎಂಬವರ ಮನೆಗಳಿಗೆ ಸಿಡಿಲು ಬಡಿದು ಭಾಗಶ: ಹಾನಿಯಾಗಿದ್ದು ತಲಾ 10,000ರೂ. ಹಾನಿ ಸಂಭವಿಸಿದ ಅಂದಾಜು ಮಾಡಲಾಗಿದೆ.
ಜಿಲ್ಲೆಯಲ್ಲಿ ನಿನ್ನೆ ಸರಾಸರಿ 24.2 ಮಿ.ಮೀ. ಮಳೆ ಸುರಿದಿದೆ. ಉಡುಪಿಯಲ್ಲಿ 21.5, ಕುಂದಾಪುರದಲ್ಲಿ 18.9 ಹಾಗೂ ಕಾರ್ಕಳದಲ್ಲಿ 34.1ಮಿ.ಮೀ. ಮಳೆ ಸುರಿದಿದೆ ಎಂದು ಜಿಲ್ಲಾ ನಿಯಂತ್ರಣ ಕೊಠಡಿಯ ಮಾಹಿತಿ ತಿಳಿಸಿದೆ.