‘ಟೀಂ ಬಿ ಹ್ಯೂಮನ್’ನಿಂದ 600 ಕುಟುಂಬಗಳಿಗೆ ರೇಶನ್ ಕಿಟ್ ವಿತರಣೆ
ಮಂಗಳೂರು, ಎ.9: ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ಸರಕಾರ ವಿಧಿಸಿರುವ ಲಾಕ್ಡೌನ್ನಿಂದ ಕಂಗಾಲಾದ ವಲಸೆ ಕಾರ್ಮಿಕರ ಹೊಟ್ಟೆ ತಣಿಸುವ ಕಾರ್ಯವನ್ನು ಕ್ಷಿಪ್ರಗತಿಯಲ್ಲಿ ಕೈಗೆತ್ತಿಕೊಂಡಿರುವ ಮಂಗಳೂರಿನ ಟೀಂ ಬಿ ಹ್ಯೂಮನ್ ಸಮಾಜ ಸೇವಾ ಸಂಸ್ಥೆಯು ಇದೀಗ ಎಲ್ಲ ಜಾತಿ, ಧರ್ಮಗಳ ದಿನಕೂಲಿ ಕಾರ್ಮಿಕರು ಮತ್ತು ಬಡವರ ಮನೆ ಬಾಗಿಲಿಗೆ ರೇಶನ್ ಕಿಟ್ ತಲಪಿಸುವ ಯೋಜನೆಯನ್ನು ಮುಂದುವರಿಸಿದೆ.
ಟೀಂ ಬಿ ಹ್ಯೂಮನ್ನ ಸ್ಥಾಪಕಾಧ್ಯಕ್ಷ ಆಸಿಫ್ ಡೀಲ್ಸ್ ಅವರ ನೇತೃತ್ವದಲ್ಲಿ ಸದಸ್ಯರಾದ ಅಲ್ತಾಫ್, ನವಾಝ್, ಶಮೀಮ್, ಅಶ್ರಫ್ ಐನಾ ಗ್ರೂಪ್, ಬಾಷಾ, ಪ್ರದೀಪ್ ಅವರನ್ನೊಳಗೊಂಡ ತಂಡವು ಈ ಸೇವೆಯಲ್ಲಿ ತೊಡಗಿಸಿಕೊಂಡಿದೆ.
ಕಾವೂರು, ಬಜ್ಪೆ, ಕಿನ್ನಿಗೋಳಿ, ಪಕ್ಷಿಕೆರೆ, ಬೈಕಂಪಾಡಿ ಪರಿಸರದ 63 ಕುಟುಂಬಗಳಿಗೆ ಕಿಟ್ ತಲುಪಿಸಲಾಗಿದ್ದು, ಬಜ್ಪೆಯ ಇಮ್ತಿಯಾಝ್ ಗೋಲ್ಡನ್ ಮತ್ತು ಪಾಟ್ರಿಸಿಯಾ ಡಿಸೋಜ ತಂಡದಲ್ಲಿದ್ದು ಸಹಕರಿಸಿದ್ದಾರೆ.
ಶಕ್ತಿನಗರ, ಕುಲಶೇಖರ, ಪದವು, ವಾಮಂಜೂರು, ಅಡ್ಡೂರು, ಪುಂಚಮೆ, ಬಡಕಬೈಲು, ಕರಿಯಂಗಳ ಮತ್ತು ಕಲ್ಲಾಯಿ ಪರಿಸರದ 118 ಕುಟುಂಬಗಳಿಗೆ ಕಿಟ್ ನೀಡಲಾಗಿದ್ದು, ಹಿದಾಯ ಫೌಂಡೇಶನ್ನ ಹಕೀಮ್ ಕಲ್ಲಾಯಿ, ಕರಿಯಂಗಳ ಗ್ರಾಪಂ ಸದಸ್ಯ ನವಾಝ್ ಮತ್ತು ಬಡಕಬೈಲು ಎಂಜೆಎಂ ಅಧ್ಯಕ್ಷ ಬಶೀರ್ ತಂಡದಲ್ಲಿದ್ದು ಸಹಕರಿಸಿದ್ದಾರೆ.
ದೇರಳಕಟ್ಟೆ, ಅಳೇಕಲ, ಪಾನೇಲ, ಮುಡಿಪು, ಬೋಳಿಯಾರು, ಕುತ್ತಾರು ಪದವು ಪರಿಸರದ 105 ಮನೆಗಳಿಗೆ ಕಿಟ್ ವಿತರಿಸಲಾಗಿದ್ದು, ಸಾಮಾಜಿಕ ಕಾರ್ಯಕರ್ತ ಸಿದ್ದೀಕ್ ದೇರಳಕಟ್ಟೆ ತಂಡದಲ್ಲಿದ್ದು ಸಹಕರಿಸಿದ್ದಾರೆ.
ಬಿ.ಸಿ.ರೋಡ್, ಗೂಡಿನಬಳಿ, ಮೆಲ್ಕಾರ್, ಲೊರೆಟ್ಟೊ ಪದವು ಮತ್ತು ಬರೈಕಾಡು ಪರಿಸರದ 125 ಕುಟುಂಬಗಳಿಗೆ ಕಿಟ್ ತಲಪಿಸಲಾಗಿದ್ದು, ಬಂಟ್ವಾಳದ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಬಿ.ಎ. ಮುಹಮ್ಮದ್ ಮತ್ತು ಎಸ್ಕೆಎಸೆಸ್ಸೆಫ್ ಸಂಘಟನೆಯ ಸಿರಾಜ್ ಫೈಝಿ ತಂಡದಲ್ಲಿದ್ದು ಸಹಕರಿಸಿದ್ದಾರೆ.
ಕಂಕನಾಡಿ, ಸೂಟರ್ಪೇಟೆ, ಜೆಪ್ಪು, ಮಜಿಲಾ, ಬಲ್ಮಠ, ಕದ್ರಿ, ಪಡೀಲ್ ಮತ್ತು ಉಜ್ಜೋಡಿ ಪರಿಸರದ 32 ಹಾಗೂ ಅಳಕೆ, ಸುಲ್ತಾನ್ ಬತ್ತೇರಿ, ಉರ್ವ, ಬಂಗ್ರ ಕೂಳೂರು ಮತ್ತು ಕಾವೂರು ಪರಿಸರದಲ್ಲಿ 85 ಕುಟುಂಬಗಳಿಗೆ ಕಿಟ್ ನೀಡಲಾಗಿದೆ.
ಬಂದರ್, ಅತ್ತಾವರ, ಪಾಂಡೇಶ್ವರ, ಬೋಳಾರ ಮತ್ತು ತಣ್ಣೀರುಬಾವಿ ಪರಿಸರದ 68 ಕುಟುಂಬಗಳಿಗೆ ಕಿಟ್ ನೀಡಲಾಗಿದ್ದು, ಹಿದಾಯ ಫೌಂಡೇಶನ್ನ ಅಧ್ಯಕ್ಷ ಮನ್ಸೂರ್ ಅಹ್ಮದ್ ಆಝಾದ್ ಮತ್ತು ಝಿಯಾಉದ್ದೀನ್ ಸಹಕರಿಸಿದ್ದಾರೆ.
2ನೆ ಹಂತದಲ್ಲಿ 900 ರೇಶನ್ ಕಿಟ್ಗಳು ಹಾಗೂ 3ನೇ ಹಂತದಲ್ಲಿ 1000 ರಮಝಾನ್ ಕಿಟ್ಗಳನ್ನು ನೀಡುವ ಯೋಜನೆಯಿದ್ದು, ದೇಣಿಗೆದಾರರು ಮತ್ತು ಪ್ರಾಯೋಜಕರ ಪ್ರೋತ್ಸಾಹವನ್ನು ಸಂಸ್ಥೆಯು ನಿರೀಕ್ಷಿಸುತ್ತಿದೆ ಎಂದು ಟೀಂ ಬಿ ಹ್ಯೂಮನ್ನ ಸ್ಥಾಪಕಾಧ್ಯಕ್ಷ ಆಸಿಫ್ ಡೀಲ್ಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.