ಎ.14ರವರೆಗೆ ಉಡುಪಿ ಜಿಲ್ಲಾಧಿಕಾರಿ ಕಚೇರಿ ಬರುವುದಕ್ಕೆ ನಿಷೇಧ
ಉಡುಪಿ, ಎ.9: ಕೊರೋನ ವೈರಸ್ಗಾಗಿ ದೇಶಾದ್ಯಂತ ಲಾಕ್ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಜನರು ವಿವಿಧ ಬೇಡಿಕೆಗಳೊಂದಿಗೆ ಬೇರೆ ಬೇರೆ ಕಾರಣಗಳಿಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಎ.14ರವರೆಗೆ ಬರುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಲಾಕ್ಡೌನ್ ಕಾರಣದಿಂದ ಜನರು ಹೊರಗೆ ಸಂಚರಿಸುವುದನ್ನು ನಿರ್ಬಂಧಿ ಸಲಾಗಿದ್ದು, ಜಿಲ್ಲೆಯಲ್ಲಿ ಪ್ರಸ್ತುತ ನಿಷೇಧಾಜ್ಞ ಇದ್ದರೂ, ಸಣ್ಣಪುಟ್ಟ ಕಾರಣಕ್ಕೆ ಅನುಮತಿ ಕೋರಿ ಪ್ರತಿದಿನ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆ ಯಲ್ಲಿ ಬರುತಿದ್ದು, ಇದು ಸರಕಾರದ ಆದೇಶದ ಉಲ್ಲಂಘನೆಯಾಗಿದೆ.
ಹೀಗಾಗಿ ಅನಾವಶ್ಯಕವಾಗಿ ಅನುಮತಿ ಪಡೆಯಲು ಸಾರ್ವಜನಿಕರು ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಬರುವುದನ್ನು ಎ.14ರವರೆಗೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೆ ತುರ್ತು ವೈದ್ಯಕೀಯ ಚಿಕಿತ್ಸೆಯ ನೆಲೆಯಲ್ಲಿ ಬೇರೆ ಜಿಲ್ಲೆಯ ಆಸ್ಪತ್ರೆಗೆ ತೆರಳಲು ವೈದ್ಯಕೀಯ ದೃಢಪತ್ರದೊಂದಿಗೆ ಸಾರ್ವಜನಿಕರಿಗೆ ಅನುಮತಿಯನ್ನು ಪಡೆಯಲು ಮಾತ್ರ ಅವಕಾಶ ನೀಡಲಾಗಿದೆ. ಇದನ್ನು ಹೊರತು ಪಡಿಸಿದರೆ ಬೇರೆ ಯಾವುದೇ ಅನುಮತಿಗಾಗಿ ಸಾರ್ವಜನಿಕರು ತಮ್ಮ ಕಚೇರಿಗೆ ಆಗಮಿಸದಂತೆ ಜಿಲ್ಲಾಧಿಕಾರಿ ಗಳು ಪತ್ರಿಕಾ ಹೇಳಿಕೆಯಲ್ಲಿ ವಿನಂತಿಸಿದ್ದಾರೆ.