ಉಜಿರೆ : ನಿಂತಿದ್ದ ಲಾರಿಗೆ ಕಾರು ಢಿಕ್ಕಿ ; ಮಗು ಮೃತ್ಯು, ನಾಲ್ಕು ಮಂದಿಗೆ ಗಾಯ
ಬೆಳ್ತಂಗಡಿ: ಉಜಿರೆ ಸಮೀಪದ ರಸ್ತೆಯಲ್ಲಿ ಕಾರೊಂದು ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ 9 ತಿಂಗಳ ಮಗು ಮೃತಪಟ್ಟು 4 ಮಂದಿ ಗಂಭೀರ ಗಾಯಗೊಂಡ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.
ಉಜಿರೆ ಪಾಣ್ಯಾಲು ನಿವಾಸಿ ಪ್ರಮೋದ್ ಎಂಬವರ 9 ತಿಂಗಳ ಮಗು ಮಾಧವಿ ಗಂಭೀರ ಗಾಯಗೊಂಡು ಆಸ್ಪತ್ರೆ ಸಾಗಿಸುವ ಮಧ್ಯೆ ಮೃತ ಪಟ್ಟಿದೆ. ಇನ್ನುಳಿದಂತೆ ಕಾರು ಚಲಾಯಿಸುತ್ತಿದ್ದ ಪ್ರಮೋದ್ ಹಾಗೂ ಪತ್ನಿ ಅಶ್ವಿನಿ ಸಹ ಸವಾರರಾದ ಮಮತಾ, ಅವರ ಮಗು ಸ್ವಾತಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರಮೋದ್ ಅವರು ಕುಟುಂಬ ಸಮೇತರಾಗಿ ವಾಮದ ಪದವಿನಲ್ಲಿ ಸಂಬಂಧಿಕರ ಮನೆಗೆ ತೆರಳಿ ರಾತ್ರಿ 11 ರವೇಳೆಗೆ ಮನೆಗೆ ಹಿಂದಿರುಗುವಾಗ ಉಜಿರೆ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ರಸ್ತೆ ಬದಿಯಲ್ಲಿ ನಿಲ್ಲಿಸಿದ ಲಾರಿಗೆ ಢಿಕ್ಕಿ ಹೊಡೆದಿದೆ.
ಢಿಕ್ಕಿ ರಭಸಕ್ಕೆ ವಾಹನ ಮುಂಭಾಗ ಜಖಂಗೊಂಡಿತ್ತು. ತಕ್ಷಣ ಸ್ಥಳೀಯರ ಸಹಕಾರದಿಂದ ಗಂಭೀರ ಗಾಯಗೊಂಡ ಮಮತಾ, ಸಾತ್ವಿ ಅವರನ್ನು ಉಜಿರೆ ಆಸ್ಪತ್ರೆಗೆ ಹಾಗೂ ಪ್ರಮೋದ್, ಅಶ್ವಿನಿ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.