ಗಂಗೊಳ್ಳಿಯಲ್ಲಿ ಭಟ್ಕಳದ ಮತ್ತೆ ಎರಡು ಬೋಟುಗಳು ಲಂಗರು!
ಗಂಗೊಳ್ಳಿ, ಮೇ 12: ಯಾವುದೇ ಅನುಮತಿ ಇಲ್ಲದೆ ಗಂಗೊಳ್ಳಿ ಬಂದರಿನ ಸಮೀಪದ ಮ್ಯಾಂಗನೀಸ್ ವಾರ್ಫ್ನಲ್ಲಿ ಇಂದು ನಸುಕಿನ ವೇಳೆ ಭಟ್ಕಳದ ಎರಡು ಬೋಟುಗಳು ಲಂಗರು ಹಾಕಿದ್ದು, ಇದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿರುವ ಘಟನೆ ನಡೆದಿದೆ.
ರಾತೋರಾತ್ರಿ ಬಂದರಿಗೆ ಬೋಟುಗಳನ್ನು ತಂದು ಮೀನುಗಾರರು ನಿಲ್ಲಿಸಿ ಹೋಗಿದ್ದರು. ಬೆಳಗ್ಗೆ ಮಾಹಿತಿ ತಿಳಿದು ಬಂದರಿನಲ್ಲಿ ಜಮಾಯಿಸಿದ ಮೀನುಗಾರರು, ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಗಂಗೊಳ್ಳಿ ಕರಾವಳಿ ಕಾವಲು ಪಡೆಯ ಪೊಲೀಸರು ಪರಿಶೀಲನೆ ನಡೆಸಿದರು.
ಅದೇ ರೀತಿ ಬಂದರು ಇಲಾಖೆಯ ಅಧಿಕಾರಿಗಳು ಮತ್ತು ಗಂಗೊಳ್ಳಿ ಪೊಲೀಸರು ಆಗಮಿಸಿ ವಿಚಾರಿಸಿದಾಗ ಈ ಎರಡು ಬೋಟು ಗಳ ಮಾಲಕರಲ್ಲಿ ಒಬ್ಬರು ಗುಜ್ಜಾಡಿಯವರು, ಇನ್ನೊಬ್ಬರು ಉಪ್ಪುಂದದವರು ಎಂದು ತಿಳಿದು ಬಂದಿದೆ. ಅವರನ್ನು ಕರೆಸಿ ಹೊರ ಜಿಲ್ಲೆಯಿಂದ ಅಕ್ರಮವಾಗಿ ತಂದಿರುವ ಬೋಟನ್ನು ತೆರವುಗೊಳಿಸಲು ಇಲಾಖಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಇವರು ಪ್ರತಿ ಮಳೆಗಾಲಕ್ಕೂ ಈ ಬೋಟುಗಳನ್ನು ಇಲ್ಲೇ ನಿಲ್ಲಿಸುತ್ತಿರುವುದ ರಿಂದ ಈ ಬಾರಿಯು ಇಲ್ಲಿಗೆ ತಂದು ನಿಲ್ಲಿಸಿದ್ದಾರೆ. ಆದರೆ ಕೊರೋನ ಭೀತಿಯ ಹಿನ್ನೆಲೆಯಲ್ಲಿ ಹೀಗೆ ಹೊರ ಜಿಲ್ಲೆಯ ಬೋಟುಗಳು ಅನುಮತಿ ಇಲ್ಲದೆ ಜಿಲ್ಲೆಯ ಬಂದರುಗಳಲ್ಲಿ ನಿಲ್ಲಿಸುವಂತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಹೀಗೆ ಮೇ 7ರಂದು ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಯಾವುದೇ ಅನುಮತಿ ಇಲ್ಲದೆ ಲಂಗರು ಹಾಕಿದ್ದ ಭಟ್ಕಳದ ಎಂಟು ಪರ್ಸಿನ್ ಬೋಟು ಗನ್ನು ವಾಪಾಸ್ಸು ಕಳುಹಿಸಲಾಗಿತ್ತು.