ದಿಢೀರ್ ಹಿಂದಕ್ಕೆ ಚಲಿಸಿ ಕಾರಿಗೆ ಢಿಕ್ಕಿಯಾದ ಲಾರಿ: ಓರ್ವ ಮೃತ್ಯು
ಕಾಸರಗೋಡು, ಮೇ 27: ಮರ ಹೇರಿದ ಲಾರಿಯೊಂದು ದಿಢೀರ್ ಹಿಂದಕ್ಕೆ ಚಲಿಸಿದ ಪರಿಣಾಮ ಕಾರಿಗೆ ಡಿಕ್ಕಿ ಹೊಡೆದು ಓರ್ವ ಮೃತಪಟ್ಟ ಘಟನೆ ಪಡನ್ನಕಾಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ನಡೆದಿದೆ.
ಮೃತಪಟ್ಟವರನ್ನು ಬಂದಡ್ಕ ಬಳಿಯ ಬೇತೂರುಪಾರದ ಗೋಪಾಲಕೃಷ್ಣನ್ (57) ಎಂದು ಗುರುತಿಸಲಾಗಿದೆ. ಇವರ ಜೊತೆಗೆ ಕಾರಿನಲ್ಲಿದ್ದ ಬೇತೂರುಪಾರದ ಗಿರೀಶ್ ಎಂಬವರು ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗೋಪಾಲಕೃಷ್ಣನ್ರ ಪತ್ನಿ ಓಮನ, ಮಕ್ಕಳಾದ ಜಿತಿನ್, ಜಿಷ್ಣು ಹಾಗೂ ಬೇತೂರುಪಾರದ ಗಿರೀಶ್ ಎಂಬವರು ಇಂದು ಮುಂಜಾನೆ ಪರಶ್ಶಿನಿಕಡವು ಕ್ಷೇತ್ರಕ್ಕೆಂದು ತೆರಳಿದ್ದರು. ಇವರಿದ್ದ ಕಾರು ಪಡನ್ನಕ್ಕಾ ತಲುಪಿದಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಮರ ಹೇರಿದ ಲಾರಿ ದಿಢೀರ್ ಹಿಂದಕ್ಕೆ ಚಲಿಸಿದೆ. ಈ ವೇಳೆ ಲಾರಿಯಲ್ಲಿದ್ದ ಮರ ಕಾರಿಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಗಂಭೀರ ಗಾಯಗೊಂಡ ಗೋಪಾಲ ಕೃಷ್ಣರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ. ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.