ಗ್ರಾಮೀಣ ಉದ್ಯೋಗ ಖಾತ್ರಿ ಕೂಲಿಕಾರರ ಸಮಾವೇಶ
ಬೈಂದೂರು, ಮೇ 18: ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ವತಿಯಿಂದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕೆಲಸಗಾರರ ಸಮಾವೇಶವು ಮೇ 16ರಂದು ಉಪ್ಪುಂದ ರಥಬೀದಿಯ ಬಳಿ ಜರಗಿತು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ, ನರೇಗಾ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಬೈಂದೂರು ತಾಲೂಕು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಸಂಘದ ಮುಖಂಡರಾದ ಶ್ರೀಧರ ಉಪ್ಪುಂದ, ರಾಘೇಂದ್ರ ಉಪ್ಪುಂದ ಅತಿಥಿಗಳಾಗಿದ್ದರು.
ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಉಪ್ಪುಂದದ ಅಧ್ಯಕ್ಷ ಬಾಬು ಕೆ.ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಸುಮಾರು 80ಕ್ಕೂ ಹೆಚ್ಚು ಕೂಲಿಕಾರರಿಗೆ ಉದ್ಯೋಗ ಚೀಟಿ ಕೊಡಬೇಕೆಂದು ಒತ್ತಾಯಿಸಲು ಸಂಘದ ನೇತೃತ್ವದಲ್ಲಿ ಮೇ 20ರಂದು ಉಪ್ಪುಂದ ಗ್ರಾಪಂ ಕಚೇರಿ ಅಧಿಕಾರಿಗಳನ್ನು ಭೇಟಿ ಮಾಡುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.
Next Story