ಮಿಲಾಗ್ರಿಸ್ ವಿದ್ಯಾಸಂಸ್ಥೆಯಿಂದ ವಲಸೆ ಕಾರ್ಮಿಕರಿಗೆ ಆಶ್ರಯ
ಮಂಗಳೂರು, ಮೇ 21: ಮಿಲಾಗ್ರಿಸ್ ವಿದ್ಯಾಸಂಸ್ಥೆಯು ದಕ್ಷಿಣ ಕನ್ನಡ ಜಿಲ್ಲಾಡಳಿತದ ವಿನಂತಿಯ ಮೇರೆಗೆ ಉತ್ತರ ಪ್ರದೇಶ ಮೂಲದ ಸುಮಾರು 550 ವಲಸೆ ಕಾರ್ಮಿಕರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಒದಗಿಸಿದೆ.
ಒಂದು ವಾರದಿಂದ ಮಂಗಳೂರು ಕೇಂದ್ರ ರೈಲ್ವೆ ನಿಲ್ದಾಣದ ಮೂಲಕ ವಿಶೇಷ ರೈಲಿನಲ್ಲಿ ಅವರನ್ನು ಸ್ವಂತ ಊರುಗಳಿಗೆ ಕಳುಹಿಸಿಕೊಡಲು ಪ್ರಯತ್ನಗಳು ನಡೆಯುತ್ತಿದ್ದು, ಕಾರ್ಮಿಕರು ಅತಂತ್ರರಾಗಿದ್ದರು. ಅವರಿಗೆ ಆಹಾರದ ಸಮಸ್ಯೆಯೂ ಉಂಟಾಗಿತ್ತು. ಈ ಸಂದರ್ಭದಲ್ಲಿ ಮಿಲಾಗ್ರಿಸ್ ಸಂಸ್ಥೆಯು ಕಂದಾಯ ಇಲಾಖೆಯನ್ನು ಸಂಪರ್ಕಿಸಿ ಸ್ವ ಇಚ್ಛೆಯಿಂದ ಈ ಜನರಿಗೆ ಉತ್ತಮ ಆಹಾರ ನೀಡುವ ಅನುಮತಿ ಪಡೆದು ಮೇ 19 ಹಾಗೂ 20ರಂದು ಈ ಕಾರ್ಯದಲ್ಲಿ ತೊಡಗಿಸಿಕೊಂಡಿತು.
ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರು ವಂ. ಪೀಟರ್ ಪೌಲ್ ಸಲ್ದಾನ ಕಾರ್ಮಿಕರನ್ನು ಭೇಟಿ ಮಾಡಿ ಸಂವಾದ ನಡೆಸಿ ಆಹಾರವನ್ನು ವಿತರಿಸಿದರು. ಈ ಸೇವೆಯನ್ನು ನೆರವೇರಿಸಲು ಸಂಸ್ಥೆಯ ಹಿತೈಷಿಗಳ, ಉದಾರ ದಾನಿಗಳಾದ ಜೋನ್ ಸ್ಯಾಮುಯೆಲ್ ಹಾಗೂ ಇತರರು ಸಹಕರಿಸಿದರು.
ಸಂಸ್ಥೆಯ ನಿರ್ದೇಶಕ ಮತ್ತು ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ವಂ. ಫಾ. ಮೈಕಲ್ ಸಾಂತುಮಾಯೋರ್ ಹಾಗೂ ಮಿಲಾಗ್ರಿಸ್ ಪ್ರೌಢಶಾಲೆಯ ಉಪಪ್ರಾಂಶುಪಾಲ ವಂ. ಫಾ.ಮ್ಯಾಕ್ಸಿಮ್ ಡಿಸೋಜರ ಮುಂದಾಳತ್ವ, ಆಸ್ಟಿನ್ ಪೆರಿಸ್ ಮತ್ತು ಜೋನ್ ಮೊಂತೇರೊ ನೆರವಾದರು.