ಕುಂದಾಪುರ, ಕಾರ್ಕಳದಲ್ಲಿ ಕೋವಿಡ್-19 ಆಸ್ಪತ್ರೆ ಕಾರ್ಯಾರಂಭ
ಕುಂದಾಪುರ-120, ಕಾರ್ಕಳ- 100 ಬೆಡ್ಗಳ ಆಸ್ಪತ್ರೆ ಸಿದ್ಧ: ಡಿಸಿ
ಕುಂದಾಪುರ, ಮೇ 21: ವಿದೇಶ ಮತ್ತು ಹೊರರಾಜ್ಯದಿಂದ ಉಡುಪಿ ಜಿಲ್ಲೆಗೆ ಬರುತ್ತಿರುವವರಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚು ಹೆಚ್ಚು ಕಂಡು ಬರುತ್ತಿರುವುದರಿಂದ ಅವರಿಗೆ ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಕಾರ್ಕಳ ಮತ್ತು ಕುಂದಾಪುರದ ಸರಕಾರಿ ಆಸ್ಪತ್ರೆಗಳನ್ನು ಕೋವಿಡ್ -19 ಆಸ್ಪತ್ರೆಯನ್ನಾಗಿ ಪರಿವರ್ತನೆಗೊಳಿಸಿದೆ.
ಕುಂದಾಪುರ ಸರಕಾರಿ ಆಸ್ಪತ್ರೆಯ ಅಧೀನದಲ್ಲಿರುವ ಶ್ರೀಮತಿ ಲಕ್ಷ್ಮೀ ಸೋಮ ಬಂಗೇರ ಸ್ಮಾರಕ ಹೆರಿಗೆ ಆಸ್ಪತ್ರೆಯನ್ನು 120 ಬೆಡ್ಗಳ ಕೋವಿಡ್ ಆಸ್ಪತ್ರೆಯನ್ನಾಗಿ ಈಗಾಗಲೇ ಮಾಡಲಾಗಿದೆ. ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯ ಹಳೆ ಕಟ್ಟಡದಲ್ಲಿ 100 ಬೆಡ್ಗಳನ್ನು ಕೊರೋನ ಸೋಂಕಿತರಿಗೆ ಚಿಕಿತ್ಸೆಗೆ ನೀಡಲು ಸಿದ್ಧತೆ ನಡೆಸಲಾಗುತ್ತಿದೆ. ಇವು ನಾಳೆಯಿಂದ ಕಾರ್ಯಾರಂಭ ಮಾಡಲಿದೆ. ಹೆರಿಗೆ ಆಸ್ಪತ್ರೆಯನ್ನು ಕೇವಲ 25ಕ್ಕೆ ಇಳಿಸಿ ಕುಂದಾಪುರ ಸರಕಾರಿ ಆಸ್ಪತ್ರೆಯ ಕಟ್ಟಡಕ್ಕೆ ವರ್ಗಾಯಿಸಲಾಗಿದೆ. ಉಳಿದ ರೋಗಿಗಳ ಚಿಕಿತ್ಸೆಯು ಇದೇ ಆಸ್ಪತ್ರೆ ಯಲ್ಲಿ ಮುಂದುವರೆಯಲಿದೆ. ಹೆಚ್ಚಿನ ಹೆರಿಗೆ ಪ್ರಕರಣಗಳು ಬಂದರೆ, ಉಡುಪಿ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಅಥವಾ ಕೋಟ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗುತ್ತದೆ.
ಕುಂದಾಪುರ ಆಸ್ಪತ್ರೆಗೆ ಇಂದು ಭೇಟಿ ನೀಡಿದ ಜಿಲ್ಲಾಧಿಕಾರಿ ಮಾತನಾಡಿ, ವಿದೇಶ ಮತ್ತು ಹೊರರಾಜ್ಯದಿಂದ ಉಡುಪಿ ಜಿಲ್ಲೆಗೆ ಬರುತ್ತಿರುವ ಸಾಕಷ್ಟು ಮಂದಿ ಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಕಂಡುಬರುತ್ತಿವೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಕೊರೋನ ಲಕ್ಷ್ಮಣಗಳಿಲ್ಲದ ಸೋಂಕಿ ತರಿಗೆ ಕಾರ್ಕಳ ಮತ್ತು ಕುಂದಾಪುರದಲ್ಲಿ ಚಿಕಿತ್ಸೆ ನೀಡಲು ನಿರ್ಧರಿಸ ಲಾಗಿದೆ ಎಂದು ತಿಳಿಸಿದರು.
ನಮ್ಮಲ್ಲಿ ಶೇ.95ರಷ್ಟು ಕೊರೋನ ರೋಗ ಲಕ್ಷ್ಮಣಗಳಿದ್ದ ಪಾಸಿಟಿವ್ ಪ್ರಕರಣ ಗಳು ಕಂಡುಬರುತ್ತಿವೆ. ಆದುದರಿಂದ ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಆಕ್ಸಿಜನ್, ವೆಂಟಿಲೇಟರ್, ಐಸಿಯು ಅಗತ್ಯ ಇಲ್ಲದ ಸೋಂಕಿತ ರಿಗೆ ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು. ಅದಕ್ಕಾಗಿ 120 ಬೆಡ್ಗಳು ಸಿದ್ಧವಾಗಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವವರನ್ನು ಉಡುಪಿಯ ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುವುದು ಎಂದರು.
ಈ ಹಿನ್ನೆಲೆಯಲ್ಲಿ ವೈದ್ಯರ ತಂಡ ಮತ್ತು ಕೊರೋನ ವಾರಿಯರ್ಸ್ಗಳು ಕೂಡ ಸಜ್ಜಾಗಿದ್ದಾರೆ. ಇವರಿಗೆ ಹೆಚ್ಚುವರಿ ಸಿಬ್ಬಂದಿ ಬೇಕಾದರೆ ನೇಮ ಕಾತಿ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಅದೇ ರೀತಿ ಖಾಸಗಿ ಆಸ್ಪತ್ರೆಯ ವೈದ್ಯರನ್ನು ಬಳಸಿಕೊಳ್ಳುವ ಬಗ್ಗೆ ಈಗಾಗಲೇ ಭಾರತೀಯ ವೈದ್ಯರ ಸಂಘದ ಜೊತೆ ಮಾತುಕತೆ ಮಾಲಾಗಿದೆ ಎಂದು ಅವರು ಹೇಳಿದರು.
ಈಗಾಗಲೇ ರೋಗ ಬಂದಾಗಿದೆ. ಇನ್ನು ಜೀವವನ್ನು ರಕ್ಷಿಸುವುದು ನಮ್ಮ ಉದ್ದೇಶವಾಗಿದೆ. ಆದುದರಿಂದ ಪ್ರತಿಯೊಂದು ಪ್ರಕರಣವನ್ನು ಸವಾಲಾಗಿ ಸ್ವೀಕರಿಸಲಾಗುವುದು. ಇದಕ್ಕೆ ಇಡೀ ತಂಡ ಅಣಿಯಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು. ಈ ಸಂದರ್ಭದಲ್ಲಿ ಕುಂದಾಪುರ ಎಸಿ ರಾಜು, ಡಿಎಚ್ಓ ಡಾ.ಸುಧೀರ್ಚಂದ್ರ ಸೂಡಾ, ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ವೈದ್ಯಾಧಿಕಾರಿ ಡಾ.ರಾಬರ್ಟ್, ಮುಖ್ಯ ಅಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಕಳ ಆಸ್ಪತ್ರೆ ಪರಿಶೀಲನೆ: ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಈ ಆಸ್ಪತ್ರೆಯನ್ನು 100 ಬೆಡ್ಗಳ ಕೋವಿಡ್ ಆಸ್ಪತ್ರೆಯನ್ನಾಗಿ ಸಜ್ಜುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಸುನೀಲ್ ಕುಮಾರ್ ಹಾಜರಿದ್ದರು.