ಇತ್ತಂಡಗಳ ಮಧ್ಯೆ ಹೊಡೆದಾಟ: ಬೆನ್ನಟ್ಟಿದ ಕಾರು ಪಲ್ಟಿ
ಕುಂದಾಪುರ, ಮೇ 21: ಯುವತಿಯ ಚುಡಾವಣೆ ವಿಚಾರದಲ್ಲಿ ಎರಡು ತಂಡಗಳ ಮಧ್ಯೆ ಹೊಡೆದಾಟ ನಡೆದಿದ್ದು, ಈ ಸಂಬಂಧ ಎರಡು ತಂಡ ಗಳು ಪ್ರತ್ಯೇಕ ಕಾರಿನಲ್ಲಿ ಇಂದು ಬೆಳಗ್ಗೆ ಬೆನ್ನಟ್ಟಿಕೊಂಡು ಬಂದು, ಹಟ್ಟಿಯಂಗಡಿಯ ಗ್ರಾಮದ ಕನ್ಯಾನ ಬಳಿ ಒಂದು ಕಾರು ಪಲ್ಟಿಯಾಗಿರುವ ಬಗ್ಗೆ ವರದಿಯಾಗಿದೆ.
ಯುವತಿಯ ಚುಡಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ಮದ್ಯೆ ಮೇ 19ರಂದು ಮರವಂತೆಯಲ್ಲಿ ಗಲಾಟೆ ನಡೆದಿತ್ತು. ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ದೂರು ನೀಡಲಾಗಿತ್ತು. ಇದೇ ವಿಚಾರವಾಗಿ ನಾವುಂದ ಕಡೆಯಿಂದ ಕಾರೊಂದನ್ನು ಇನ್ನೊಂದು ಕಾರಿನವರು ಬೆನ್ನಟ್ಟಿ ಕೊಂಡು ಬಂದಿದ್ದು, ಇದರಿಂದಾಗಿ ನಿಯಂತ್ರಣ ತಪ್ಪಿದ ಆಸೀಫ್ ಎಂಬವರ ಬೊಲೆನೋ ಕಾರು ಪಲ್ಟಿಯಾಗಿದೆ ಎನ್ನಲಾಗಿದೆ.
ಈ ಸಂಬಂಧ ನಾವುಂದ ಗ್ರಾಮದ ಬಡಾಕೆರೆ ನಿವಾಸಿ ಮೊಹಮ್ಮದ್ ಆಸೀಫ್ ಎಂಬವರು ನೀಡಿದ ದೂರಿನಂತೆ ಮೊಹಮ್ಮದ್ ರಿಯಾಜ್, ಅಶ್ಫಕ್ ಅಹಮ್ಮದ್, ಮೊಹಮ್ಮದ್ ಅಶ್ರಫ್, ಅಹಮ್ಮದ್ ಹಾಗೂ ಸತೀಶ್ ವಿರುದ್ಧ ಪ್ರಕರಣ ದಾಖಲಾಗಿದೆ. ಈ ವಿಚಾರವಾಗಿ ಮಹಮ್ಮದ್ ಆಶ್ರಫ್ ನೀಡಿದ ಪ್ರತಿ ದೂರಿನಲ್ಲಿ ಆಸೀಫ್ ಹಾಗೂ ಇತರೆ ನಾಲ್ವರ ವಿರುದ್ಧ ಪ್ರಕಣ ಗಂಗೊಳ್ಳಿ ಠಾಣೆಯಲ್ಲಿ ದಾಖಲಾಗಿದೆ.